ಸೋಮವಾರ, ಆಗಸ್ಟ್ 22, 2011

Osho & Education

ಓಶೋ ಅವರ  ಶೈಕ್ಷಣಿಕ ಚಿಂತನೆಗಳು
(ಕನಿಷ್ಠ ಎರಡು ಭಾಷೆಗಳ ಜ್ಞಾನ ಬೇಕು)
 ಶೈಕ್ಷಣಿಕವಾಗಿ ನಮ್ಮಲ್ಲಿ ಚಿಂತನೆಗಳಿಗೆ ಕೊರತೆ ಇಲ್ಲ. ಇದರೊಂದಿಗೆ ಸುಧಾರಣೆಯ ಹೆಸರಲ್ಲಿ ನೂರಾರು ಆಯೋಗಗಳು ವರದಿ ನೀಡುತ್ತಿವೆ. ಆದರೂ ನಿರೀಕ್ಷಿತ ಸುಧಾರಣೆಗಳಾಗಿಲ್ಲ. ಇನ್ನೂ ಚಿಂತನೆಗಳು ಹುಟ್ಟುತ್ತಲೇ ಇವೆ.  ಓಶೋರವರೂ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಅವರದ್ದೇ ಆದ ಚಿಂತನೆಗಳನ್ನು ನೀಡಿದವರು.

 ಮಾಹಿತಿಯೇ ಪ್ರಧಾನವಾಗಬಾರದು :
 ಓಶೋ ಇತರರಂತೆ ಇಂದಿನ ಶಿಕ್ಷಣ ಪದ್ಧತಿಯ ಟೀಕಾಕಾರರಲ್ಲಿ ಒಬ್ಬರು.  ಅವರ ಪ್ರಕಾರ ಶಿಕ್ಷಣ ಎಂದರೆ ಕೇವಲ ಮಾಹಿತಿಗಳ ಸಂಗ್ರಹವಲ್ಲ. ಮಾಹಿತಿಗಳು ಅಗತ್ಯವಾದರೂ ಅವುಗಳೇ ಪ್ರಧಾನವಾಗಬಾರದು.  ಈ ಬಗ್ಗೆ ಒಂದು ಚಿಕ್ಕ ಕತೆಯನ್ನೂ ಓಶೋ ನೀಡುತ್ತಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ಯಾವಾಗಲೂ ಒಂದು ಕೊಡೆ ಇರುತ್ತದೆ. ಮಳೆ ಇರಲಿ ಅಥವಾ ಬಿಸಿಲಿರಲಿ.  ಕೊಡೆ ಈ ವ್ಯಕ್ತಿಯ ಕೈಯಿಂದ ತಪ್ಪುವುದೇ ಇಲ್ಲ. ವಿಚಿತ್ರ ಎಂದರೆ ಆ ವ್ಯಕ್ತಿ  ಕೊಡೆಯನ್ನು ಎಂದಿಗೂ ಬಿಡಿಸಿಲ್ಲ ಮತ್ತು  ಬಿಡಿಸುವುದೂ ಇಲ್ಲ. ಕೊನೆಗೆ ನೋಡುವಾಗ ಆ ಕೊಡೆ ನಿರುಪಯುಕ್ತ.  ಅದರ ಅರಿವೆಯ ತುಂಬಾ  ಹಲವು ರಂಧ್ರಗಳು. ಕೇವಲ  ಮಾಹಿತಿ ಪ್ರಧಾನವಾದ ವಿದ್ಯಾಭ್ಯಾಸ ಇದರಿಂದ ಹೊರತಲ್ಲ.
 ಮಕ್ಕಳಲ್ಲೂ ಸ್ವಂತ ಯೋಚನೆಗಳಿವೆ :
 ಮಕ್ಕಳ ಯೋಚನೆ ಅಥವಾ ಚಿಂತನೆಗಳನ್ನು ಅರಳಿಸುವತ್ತ ನಮ್ಮ ಶಿಕ್ಷಣ ಸಾಗಬೇಕು ಎಂಬುದು ಓಶೋರವರ ನಿಲುವು.  ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರತ್ತ ಅವರ ಪ್ರಮುಖ ಆಕ್ಷೇಪ. ಮಕ್ಕಳಲ್ಲಿರುವ ಸರ್ಜನಶೀಲ ಗುಣಗಳನ್ನು ಗುರುತಿಸಬೇಕು. ಅವುಗಳನ್ನು ಅರಳಿಸಲು ಪ್ರೋತ್ಸಾಹಿಸಬೇಕು.  ಮಕ್ಕಳು ನಾವು ತಿಳಿದಂತೆ ದಡ್ಡರಲ್ಲ ಎನ್ನುವ ಓಶೋ ಹಲವು ಕತೆಗಳ ಮೂಲಕ ಮಕ್ಕಳ ಈ ಗುಣಗಳನ್ನು ವಿವರಿಸುತ್ತಾರೆ.  ಈ  ಕುರಿತಂತೆ ಓಶೋ ನೀಡುವ ಹಲವು ಒಂದು ನಿದರ್ಶನಗಳಲ್ಲಿ ಒಂದು  ಹೀಗಿದೆ.  ಒಬ್ಬ ತಂದೆ ನಿರಂತರ ತನ್ನ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದನು. ತನ್ನ ಯೋಚನೆಗಳನ್ನು ಹೇರುವುದರಲ್ಲೇ ಆತನಿಗೆ ಆನಂದ. ತಾನು ಬಯಸಿದಂತೆ ತನ್ನ ಮಗ ಬೆಳೆಯಲೇಬೇಕೆಂಬ ಕನಸು.  ತಂದೆಯ ನಿರಂತರ ಬೋಧೆ ಮಗನಿಗೆ ಬೇಸರ ತರಿಸದೇ ಇರುತ್ತದೆಯೇ?.  ಒಮ್ಮೆ ಹೀಗಾಯಿತು. ಬೇರೆ ಮಕ್ಕಳಿಗೆ ಹೋಲಿಸಿ ತನ್ನ ಮಗನನ್ನು ತಂದೆ ಕೆಣಕುತ್ತಾನೆ. ಆ ಮಕ್ಕಳ ಮುಂದೆ ನೀನು ಶತದಂಡ ಎಂದು ತಂದೆಗೆ ಮಾತಿನ ಮೂಲಕ ಸಾಬೀತು ಪಡಿಸುವ ತವಕ. ಮಗನಿಗೂ  ತಂದೆಯ ಮತುಗಳನ್ನು ಕೇಳಿ ಕೇಳಿ ಸಾಕಾಗಿತ್ತು.  ಮಗನು ತಂದೆಗೆ ಅದೇ ದಾಟಿಯಲ್ಲಿ ಉತ್ತರಿಸುತ್ತಾನೆ.   ಅಪ್ಪಾ ! ಆತನ ತಂದೆ ಕೂಡ ಅತ್ಯಂತ ಪ್ರತಿಭಾವಂತನು. ನಿನ್ನಂತೆಯಲ್ಲ.
ಓಶೋರವರ ಪ್ರಮುಖ ಸಲಹೆಗಳು :
 ಓಶೋರವರ ಶೈಕ್ಷಣಿಕ ಚಿಂತನೆಗಳಲ್ಲಿ ಐದು ಅಂಶಗಳು ಪ್ರಮುಖವಾಗಿ ಅಡಗಿವೆ.  ಅದರಲ್ಲಿ ಪ್ರಮುಖವಾದುದು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಿಕ್ಷಣ ಪೂರಕವಾಗಿರಬೇಕು.  ಶಿಕ್ಷಣದಲ್ಲಿ ಚರಿತ್ರೆ,  ಸಂಸ್ಕೃತಿ, ಭೂಗೋಳ ಮೊದಲಾದ ಮಾಹಿತಿಗಳನ್ನು ಒದಗಿಸುವ ವಿಷಯಗಳ ಕಲಿಕೆಗಳನ್ನು ಕೈಬಿಡಬಾರದು.  ಇದೇ ಹಂತದಲ್ಲಿ ಭಾಷಾ ಕಲಿಕೆಯತ್ತಲೂ ಗಮನ ಹರಿಸಬೇಕು. ಓಶೋರವರು ತಿಳಿಸುವಂತೆ ಮಕ್ಕಳಿಗೆ ಕನಿಷ್ಠ ಎರಡು ಭಾಷೆಗಳನ್ನಾದರೂ ಕಲಿಸಬೇಕು. ಒಂದು ಮಾತೃಭಾಷೆ, ಇನ್ನೊಂದು ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷ್. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಯಷ್ಟು ಪರಿಣಾಮಕಾರಿ ಭಾಷೆ ಬೇರೆ ಇಲ್ಲ.  ಹಿರಿಯ ವಿದ್ವಾಂಸರ ಹೇಳಿಕೆಯೊಂದನ್ನು ಓಶೋ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ. ನೀನು ಪರಕೀಯ ಭಾಷೆಯಲ್ಲಿ ಎಲ್ಲವನ್ನೂ ತಿಳಿಯಬಹುದು. ಆದರೆ ಜಗಳವಾಡಲು ಅಥವಾ ಪ್ರೇಮಿಸಲು ಮಾತೃಭಾಷೆ ಬಿಟ್ಟರೆ ಬೇರೊಂದಿಲ್ಲ.ಅಂದರೆ ಭಾವನೆಗಳ ಪರಿಣಾಮಕಾರಿ ಸಂವಹನ ಕೇವಲ ಮಾತೃಭಾಷೆಯಲ್ಲಿ ಮಾತ್ರಾ ಸಾಧ್ಯ.
 ಶಿಕ್ಷಣದಲ್ಲಿ ವೈಜ್ಞಾನಿಕ ವಿಚಾರಗಳ ಕಲಿಕೆ ಇನ್ನೊಂದು ಪ್ರಮುಖ ಅಂಶ. ಇದರೊಂದಿಗೆ ಇಂದಿನ ಶಿಕ್ಷಣದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿರುವ ಜೀವನ ಕಲೆಗೆ ಆದ್ಯತೆ. ಓಶೋರವರ ಪ್ರಕಾರ ಕಲಿಕೆಯ ಈ ಹಂತದಲ್ಲಿ ಮಕ್ಕಳನ್ನು ಗಂಭೀರವದನರಾಗುವಂತೆ ನೋಡಿಕೊಳ್ಳಬಾರದು. ಹಾಸ್ಯದ ಭಾಷೆಗೆ ಶಿಕ್ಷಣದಲ್ಲಿ ಒತ್ತು ನೀಡಬೇಕು.  ಓದಿನಲ್ಲಿ ಗಂಭೀರರಾಗಿ ಅಥವಾ ದು:ಖಿಗಳಾಗಿ  ದಿನ ಕಳೆದಲ್ಲಿ ಬದುಕು ವ್ಯರ್ಥವಾಗುತ್ತದೆ.  ನಮ್ಮ ನರನಾಡಿಗಳ ತುಂಬಾ  ಇವುಗಳೇ ತುಂಬಿಕೊಳ್ಳುತ್ತವೆ. ಹಾಸ್ಯ ಅಥವಾ ನಗುವಿನ ಭಾಷೆಯೇ ಮರೆತು ಹೋಗುವ ಅಪಾಯವಿದೆ. ಹಾಗಾಗಿ ಹಾಸ್ಯ ಅಥವಾ ನಗುವನ್ನು ಅರಳಿಸುವ ಅಂಶ ಶಿಕ್ಷಣದಲ್ಲಿ ಸೇರ್ಪಡೆಗೊಳ್ಳಬೇಕು. ಗಂಭೀರತೆ ಅಥವಾ ದು:ಖ ದೂರವಾಗಬೇಕು.
 ಶಿಕ್ಷಣದಲ್ಲಿ ಅಳವಿಸಬಹುದಾದ ಮತ್ತೊಂದು ಅಂಶ ಕಲೆ ಮತ್ತು ಸೃಜನಶೀಲತೆ. ಚಿತ್ರಕಲೆ, ಸಂಗೀತ, ಕುಂಬಾರಿಕೆ , ಕಲ್ಲುಕಟ್ಟಣೆ ಹೀಗೆ ಹಲವು ವಿಚಾರಗಳನ್ನು ಇಲ್ಲಿ ಓಶೋರವರು ನೀಡುತ್ತಾರೆ.  ಸೃಜನಾತ್ಮಕವಾದ ಈ ಅಂಶಗಳನ್ನು ಕಲಿಕೆಯಲ್ಲಿ ಆಯ್ದುಕೊಳ್ಳಲು ಮಕ್ಕಳಿಗೆ ಸ್ವಾತಂತ್ಯ್ರವಿರಬೇಕು.  ಹೆಚ್ಚಿನ ಕಲೆಗಳನ್ನು ಆಯ್ದುಕೊಳ್ಳುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಬಹುದು.  ಓಶೋರವರ ಪ್ರಕಾರ ಮನುಷ್ಯನ ಅಸ್ತಿತ್ವವು ಅಡಗಿರುವುದು ಈ ಸೃಜನಾತ್ಮಕ ಕಲೆಗಳ ಮೂಲಕ. ನೂತನ ಸೃಷ್ಟಿಗೆ ಇದು ಪೂರಕವಾಗುತ್ತದೆ.
 ಓಶೋರವರು ತಿಳಿಸುವ ಇನ್ನೊಂದು ಅಂಶ ಅಧ್ಯಾತ್ಮ ವಿಚಾರಕ್ಕೆ ಸಂಬಂಧಿಸಿದುದು. ಮಕ್ಕಳಲ್ಲಿ ಧೈರ್ಯವನ್ನು ಬೆಳೆಸುವಲ್ಲಿ  ಇದು ಸಹಕಾರಿಯಾಗಬೇಕು. ಭಯವು ಮನುಷ್ಯನ ಎಲ್ಲಾ ವ್ಯಕ್ತಿತ್ವವನ್ನೂ ಮಸಕುಗೊಳಿಸುತ್ತದೆ. ಮಕ್ಕಳಲ್ಲಿ ಧೈರ್ಯ, ಸಾಹಸ ತುಂಬುವ ಕೆಲಸ ಶಿಕ್ಷಣದಿಂದ ಆಗಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಸಾಧಿಸಿ ಜೀವನ ಸಾರ್ಥಕ ಪಡಿಸಿಕೊಂಡ ಮಹಾತ್ಮರನ್ನು ಮಕ್ಕಳಿಗೆ ಪರಿಚಯಿಸಬೇಕು. ಅವರ ಧೈರ್ಯ, ಸಾಧನೆಗಳ ಹಾದಿಯತ್ತ ಮಕ್ಕಳ ಗಮನ ಸೆಳೆಯಬೇಕು. ಝೆನ್, ತಾವೋ ಮೊದಲಾದವರ ವಿಚಾರಧಾರೆಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು ಎನ್ನುತ್ತಾರೆ.   ಧ್ಯಾನ , ಯೋಗ, ಪ್ರಾಣಾಯಾಮ ಮತ್ತು ಇವುಗಳೊಂದಿಗೆ ಆತ್ಮರಕ್ಷಣಾ ವಿದ್ಯೆಗಳನ್ನು ಮಕ್ಕಳಿಗೆ ಕಲಿಸಬೇಕು.
 ಪ್ರಸ್ತುತ ಶಿಕ್ಷಣ ಪದ್ಧತಿಯ ಬಗ್ಗೆ ಅತ್ಯಂತ ಕಳವಳ ವ್ಯಕ್ತಪಡಿಸುವ ಓಶೋ ಅಮೆರಿಕಾದಲ್ಲಿ ಇಂದು ಮನ:ಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ. ಉನ್ನತ ಶಿಕ್ಷಣ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ. ಭಾರತಕ್ಕೂ ಈ ರೋಗ ತಗಲಬಹುದು. ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ವಿವಾಹ ವಿಚ್ಛೇದನ ಮೊದಲಾದ ಪಿಡುಗುಗಳು ಶಿಕ್ಷಿತ ಸಮುದಾಯದಲ್ಲಿ ಅಧಿಕವಾಗುತ್ತಿದೆ. ಬೌದ್ಧಿಕ ಬೆಳವಣಿಗೆಗಳೊಂದಿಗೆ ಭಾವನೆ ಮತ್ತು ಮೌಲ್ಯಗಳನ್ನು ಬೆಳೆಸುವ ಕೆಲಸಗಳು ಮಹತ್ತ್ವ ಕಳೆದು ಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಎಲ್ಲಾ ಆಶಯಗಳನ್ನೂ ಪೂರೈಸುವ ಶಿಕ್ಷಣ ಪದ್ಧತಿ ಬಂದೀತೇ?.        
   ಡಾ.ಶ್ರೀಕಾಂತ್ ಸಿದ್ದಾಪುರ
 

ಸೋಮವಾರ, ಆಗಸ್ಟ್ 8, 2011

ಹಳಗನ್ನಡ ಕಾವ್ಯ ಕಲಿಕೆ ಕಬ್ಬಿಣದ ಕಡಲೆಯೇ ?
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ.  ಕನ್ನಡಕ್ಕೆ ಈ ಸ್ಥಾನಮಾನ ದೊರಕಿಸುವಲ್ಲಿ ಶ್ರಮಿಸಿದ ಸಮಸ್ತ ಕನ್ನಡಾಭಿಮಾನಿಗಳನ್ನು ಇಲ್ಲಿ ಸ್ಮರಿಸಲೇಬೇಕು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಕಾರಣ ಹಳಗನ್ನಡಕ್ಕೆ  ಇಂದು ವಿಶೇಷ ಪ್ರಾಶಸ್ತ್ಯ ಬಂದಿದೆ. ಅದರ ಅಧ್ಯಯನದತ್ತ ಒಲವು ಹೆಚ್ಚುತ್ತಿದೆ. ಆದರೆ ಹಲವರ ಪಾಲಿಗೆ ಹಳಗನ್ನಡ ಇಂದು ಕಬ್ಬಿಣದ ಕಡಲೆ. ಕೆಲವು ಅಧ್ಯಾಪಕರಿಗೂ ಅದರತ್ತ ವಕ್ರದೃಷ್ಟಿ. ವಿದ್ಯಾಥರ್ಿಗಳ ಪಾಲಿಗಂತೂ ಇದು ನೀರಿಳಿಯದ ಗಂಟಲೊಳ್ ಕಡುಂಬಂ ತುರುಂಕುವ ಪ್ರಯತ್ನ.  ಹಳಗನ್ನಡವನ್ನು ಸಮರ್ಥವಾಗಿ ವಿಶ್ಲೇಷಿಸಬಲ್ಲ ವಿದ್ವಾಂಸರ ಮತ್ತು ಪಂಡಿತರ ಕೊರತೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಅಂದಿಗಿಂತ ಇಂದು ಹೆಚ್ಚು ಬಾಧಿಸುತ್ತಿದೆ. ಅದರ ಕಲಿಕೆಯತ್ತ ಆಸಕ್ತಿಯೂ ಕುಂಠಿತವಾಗುತ್ತಿದೆ.   ಹೀಗಾಗಿ ಕನ್ನಡ ಕಲಿಕೆಯತ್ತ ಚಿಂತಿಸುವ ಕಾಲ ಈಗ ಸನ್ನಿಹಿತವಾಗಿದೆ.
ಪಠ್ಯದಲ್ಲಿ ಹಳಗನ್ನಡ ಕಾವ್ಯಗಳು :
ಹಳಗನ್ನಡದ ಕಾವ್ಯಭಾಗಗಳು ಇದೀಗ ಪಠ್ಯದಿಂದ ನಿಧಾನಕ್ಕೆ ಮರೆಯಾಗುವ ಹಂತದಲ್ಲಿದೆ. ಇದಕ್ಕೆ ಒಂದು ಕಾರಣ ವಿದ್ಯಾಥರ್ಿಗಳಿಗೆ ಸುಲಭವಾಗುವ ಪಠ್ಯಗಳ ನಿರೂಪಣೆಗೆ ನೀಡುತ್ತಿರುವ ಒತ್ತು. ಇದರೊಂದಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಗ್ಲೀಷ್ ಭಾಷಾ ವ್ಯಾಮೋಹದ ಪ್ರವಾಹದಲ್ಲಿ ಕನ್ನಡ ಕಲಿಕೆಯನ್ನು ಹೇಗಾದರೂ ಉಳಿಸಲೇಬೇಕಾದ ಅನಿವಾರ್ಯತೆ. ಇಂದು ವಿದ್ಯಾಥರ್ಿಗಳು ಕಠಿಣವಾದ ಕನ್ನಡವನ್ನು ಆಯ್ಕೆ ಮಾಡಿಕೊಂಡು ಓದುವಲ್ಲಿ ಉತ್ಸುಕತೆ ತೋರಿಸರು. ಒಂದೊಮ್ಮೆ ಕಲಿತರೂ ಅದಕ್ಕೆ ಸೂಕ್ತ ಉದ್ಯೋಗ ಲಭ್ಯತೆಯ ಆಸೆ ಕ್ಷೀಣ.  ಅಧ್ಯಾಪಕರಿಗೂ ಹಳಗನ್ನಡ ಕಲಿಸುವಿಕೆ ಒಂದು ಸವಾಲು. ಇಲ್ಲಿರುವ ಹೆಚ್ಚಿನ ಶಬ್ದಗಳು ಸಂಸ್ಕೃತ ಭಾಷೆಯಿಂದ ಎರವಲು ಪಡೆದವು.  ಇದರಿಂದಾಗಿ ಹಳಗನ್ನಡ ಕಾವ್ಯಗಳ ಪಾಠದ ತಯಾರಿಗೆ ಅಧ್ಯಾಪಕರಿಗೆ ಹೆಚ್ಚಿನ ಸಮಯ ಅನಿವಾರ್ಯ.  ಇವುಗಳನ್ನು ಅರ್ಥಪೂರ್ಣವಾಗಿ ಕಲಿಸಬೇಕಾದರೆ ಕೇವಲ ಭಾಷಾಜ್ಞಾನವೊಂದೇ ಸಾಲದು. ಇದರೊಂದಿಗೆ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸುಗಳ ಜ್ಞಾನವೂ ಸ್ವಲ್ಪ ಅಗತ್ಯ.  ಸಂಸ್ಕೃತ ಭಾಷೆಯಲ್ಲಿ ಕನಿಷ್ಠ ಪರಿಶ್ರಮವಿಲ್ಲದಿದ್ದರೂ ಹಳಗನ್ನಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ.  ಹಳಗನ್ನಡ ಕಾವ್ಯಗಳ ಬೋಧನೆಗೆ ತಾಳ್ಮೆ ಅತ್ಯಗತ್ಯ. ನಿಗದಿತ ಪಠ್ಯವನ್ನು ಅವಸರವಸರವಾಗಿ ಮುಗಿಸುವ ತುರಾತುರಿಗೆ ಹಳಗನ್ನಡ ಕಾವ್ಯಗಳು ಒಗ್ಗಿಕೊಳ್ಳವು. ಆದರೆ ಈಗಿನದು ಸ್ಪಧರ್ಾತ್ಮಕ ಯುಗ.  ಕಲಿಕೆಗೂ ಇದು ಅನ್ವಯಿಸುತ್ತದೆ. ಬೋಧನಾಕ್ರಮದಲ್ಲಿ ಆಮೆ ನಡಿಗೆಗೆ ಅವಕಾಶವಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ಶೀಘ್ರವಾಗಿ ನಿಗದಿತ ಪಠ್ಯವನ್ನು ಮುಗಿಸಲೇಬೇಕು. ಕನ್ನಡ ಕಲಿಕೆಗೇ ಒಲವು ಕುಂಠಿತವಾಗುತ್ತಿರುವ ಇಂದಿನ ದಿನಗಳಲ್ಲಿ ಇಷ್ಟು ಕಷ್ಟಪಟ್ಟು ಕನ್ನಡ ಕಲಿಯುವ ಕಷ್ಟವನ್ನು ಯಾರು ತಾನೇ ಆಹ್ವಾನಿಸಿ ಕೊಳ್ಳುತ್ತಾರೆ?.   ವಿಷಯದ ಗಂಭೀರ ಅಧ್ಯಯನಕ್ಕಿಂತ ಅಂಕ ಗಳಿಕೆಗೆ ಇಂದು ಪ್ರಾಧಾನ್ಯ.  ಅಧ್ಯಯನಕ್ಕಿದ್ದ ಹಳಗನ್ನಡದ ಕಾವ್ಯಗಳ ಹೊಸಗನ್ನಡಾನುವಾದ ಓದಿಕೊಂಡರೆ  ಉತ್ತಮ ಅಂಕ ಪಡೆಯಬಹುದೆಂಬ ಭಾವನೆ ವಿದ್ಯಾಥರ್ಿಗಳಲ್ಲಿ ಬೆಳೆಯುತ್ತಿದೆ.  ಅಧ್ಯಾಪಕರ ಹಳಗನ್ನಡ ಕಾವ್ಯ ಬೋಧನೆಯ ಎಲ್ಲಾ ಕಸರತ್ತುಗಳನ್ನೂ ಬದಿಗಿಕ್ಕಿ ಕೇವಲ ಅನುವಾದಕ್ಕಾಗಿ ವಿನಂತಿಸುವುದರಲ್ಲಿಯೇ ವಿದ್ಯಾಥರ್ಿಗಳ ಶ್ರಮ.  ಕಾವ್ಯಗಳ ಒಳಹೊಕ್ಕು ರಸವನ್ನು ಆಸ್ವಾದಿಸುವ ಆಸಕ್ತಿ ಇಂದಿನ ಹಳಗನ್ನಡ ಕಾವ್ಯಗಳ ಕಲಿಕೆಯಲ್ಲಿ ಕಡಿಮೆಯಾಗುತ್ತಿದೆ. 
ಈ ಸವಾಲನ್ನು ಎದುರಿಸಬಹುದೇ ? :
1. ಕನ್ನಡ ಕಲಿಕಾ ವಾತಾವರಣ ನಿಮರ್ಾಣ :
ಈಗ ಎದುರಾಗಿರುವ ಸವಾಲನ್ನು ನಿಭಾಯಿಸಲು ಮೊದಲು ಕನ್ನಡ ಕಲಿಕೆಯತ್ತ ಆಸಕ್ತಿಯನ್ನು ಸರಕಾರ ಬೆಳೆಸಬೇಕಾಗಿದೆ. ಕನ್ನಡ ಭಾಷಾ ಬೋಧನೆಯ ವಿಚಾರದಲ್ಲಿ ಗೊಂದಲಗಳೇ ಮುಂದುವರಿಯುತ್ತಿರುವಾಗ ಕನ್ನಡದ ಬೆಳವಣಿಗೆ ಹೇಗೆ ಸಾಧ್ಯ?.  ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಕನ್ನಡ ಕಲಿಕೆಯಿಂದಲೂ ಉದ್ಯೋಗ ಮತ್ತು ಗಳಿಕೆ ಸಾಧ್ಯ ಎಂಬ ವಾತಾವರಣವನ್ನು ನಿಮರ್ಿಸಬೇಕಾಗಿದೆ.
2. ಶಾಸ್ತ್ರ ವಿಚಾರಗಳತ್ತ ಧನಾತ್ಮಕ ಒಲವು :
ಹಳಗನ್ನಡ ಅಧ್ಯಯನಕ್ಕೆ ಪೂರಕವಾದ ಛಂದಸ್ಸು, ಅಲಂಕಾರ, ವ್ಯಾಕರಣ, ಸಂಸ್ಕೃತ ಭಾಷೆ ಮತ್ತು ಗಮಕ ಕಲೆಗಳ ಪ್ರಾಥಮಿಕ ಜ್ಞಾನವನ್ನು ಕನ್ನಡ ಬೋಧಿಸುವ ಅಧ್ಯಾಪಕರಿಗೆ ನೀಡಬೇಕು. ಅದರಲ್ಲಿ ಪಾಂಡಿತ್ಯ ಸಾಧಿಸಬೇಕೆಂಬ ಆಗ್ರಹವಲ್ಲ. ಹಳಗನ್ನಡ ಕಾವ್ಯಗಳನ್ನು  ಆಕರ್ಷಕವಾಗಿ, ಅರ್ಥಪೂರ್ಣವಾಗಿ ಕಲಿಸಲು ಪೂರಕವಾಗುವಂತೆ ಇವುಗಳ ಜ್ಞಾನ ಅತ್ಯಗತ್ಯ.
3. ಗಮಕ ಕಲೆ :
ಕನಿಷ್ಠ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಕಲಿಯುತ್ತಿರುವ  ವಿದ್ಯಾಥರ್ಿಗಳಿಗಾದರೂ ಗಮಕ ಕಲೆಯ ಪರಿಚಯ ಮಾಡಿಸಬೇಕಾಗಿದೆ. ಕನ್ನಡ ಬೋಧಿಸುವ ಅಧ್ಯಾಪಕರಿಗೆ ಈ ಕುರಿತಂತೆ ವಿಶೇಷ ತರಬೇತಿ ನೀಡಬೇಕು. ಕನರ್ಾಟಕದಲ್ಲಿರುವ ಗಮಕ ಕಲಾ ಪರಿಷತ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.  ಆಶ್ಚರ್ಯ ಎಂದರೆ ಕನರ್ಾಟಕದಲ್ಲಿ ಹೀಗೊಂದು ಪರಿಷತ್ತು ಅಸ್ತಿತ್ವದಲ್ಲಿ ಇದೆ ಎಂಬುದೇ ಅನೇಕರಿಗೆ ತಿಳಿದಿಲ್ಲ.  ಗಮಕ ಪರಿಷತ್  ಕನರ್ಾಟಕದ ಕನ್ನಡ ಕಲಿಸುವ ಶಾಲಾ, ಕಾಲೇಜುಗಳ ಅಧ್ಯಾಪಕರೊಂದಿಗೆ ಸಂಪರ್ಕದಲ್ಲಿರಬೇಕು. ಅವರಿಗೆ ಪರಿಷತ್ತಿನ ಕಾರ್ಯಕಲಾಪಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರಬೇಕು.  ಅದು ನಡೆಸುತ್ತಿರುವ ಪರೀಕ್ಷೆಗಳ ಬಗ್ಗೆ ತಿಳಿಸಿ, ಅದರಲ್ಲಿ ಹೆಚ್ಚಿನವರು ಹಾಜರಾಗುವಂತೆ ಉತ್ತೇಜಿಸಬೇಕು.  ಇದರೊಂದಿಗೆ ಆಗಾಗ ಕಮ್ಮಟಗಳನ್ನು ನಡೆಸುವುದರ ಮೂಲಕ ಗಮಕ ಕಲೆಯನ್ನು ಮತ್ತು ಹಳಗನ್ನಡವನ್ನು ಶಿಕ್ಷಣದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು.
4. ಕನ್ನಡಪರವಾದ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು :
ಕನರ್ಾಟಕದಲ್ಲಿ  ಕನ್ನಡಪರವಾಗಿ ಕೆಲಸ ಮಾಡುವ ಸರಕಾರದ ಇಲಾಖೆಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಅಧೀನದಲ್ಲಿರುವ ಅಂತಹ  ಒಂದು ಇಲಾಖೆ. ಕನ್ನಡ ಸಾಹಿತ್ಯ ಪರಿಷತ್ತೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಆದರೆ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನಕ್ಕಷ್ಟೇ ಸೀಮಿತವಾಗಬಾರದು. ಕನ್ನಡಾಭಿವೃದ್ಧಿ ಪ್ರಾಧಿಕಾರವು ಕನ್ನಡಾಭಿವೃದ್ಧಿಪರ ನಿರಂತರ ಚಿಂತಿಸುತ್ತಿದೆ.  ಆದರೂ ಕನ್ನಡ ಬೋಧಿಸುವ ಶಾಲಾ, ಕಾಲೇಜುಗಳೊಂದಿಗೆ ಇವುಗಳ ಸಂಬಂಧ ಇನ್ನಷ್ಟು ಹೆಚ್ಚಬೇಕಾಗಿದೆ.  ಈಗಾಗಲೇ ಹಳಗನ್ನಡ ಮತ್ತು ನಡುಗನ್ನಡದ ಕವಿಗಳ ಕಾವ್ಯಗಳ ಸಿ.ಡಿ. ಗಳು ಬಿಡುಗಡೆಯಾದ ವಿಚಾರ ಪತ್ರಿಕೆಗಳಲ್ಲಿ ಬಂದಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದ ಜನಪ್ರಿಯ ಕ್ಯಾಸೆಟ್ ಅಂಗಡಿಗಳಲ್ಲಿ ಇವುಗಳು ಅಲಭ್ಯ. ಇದಕ್ಕೆ  ಉಳಿದ ಕ್ಯಾಸೆಟ್ಗಳಂತೆ ನಿರೀಕ್ಷಿತ ಬೇಡಿಕೆಯೂ ಇಲ್ಲ.   ಆದರೂ ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಇಂತಹ ಅಮೂಲ್ಯ ಸಿ.ಡಿ. ಮತ್ತು ಉತ್ತಮ ಪುಸ್ತಕಗಳನ್ನು ಕನ್ನಡ ಬೋಧಿಸುವ ಹಳ್ಳಿಗಳ ಶಾಲಾ, ಕಾಲೇಜುಗಳಿಗೂ, ಸಾಹಿತ್ಯಾಸಕ್ತರಿಗೂ  ಸುಲಭವಾಗಿ ಲಭಿಸುವಂತೆ ಈ ಸಂಸ್ಥೆಗಳು ಅಥವಾ ಇಲಾಖೆಗಳು ನೋಡಿಕೊಳ್ಳಬೇಕು.
 ಈ ಎಲ್ಲಾ ತೊಡರುಗಳ ನಡುವೆಯೂ ಹಳಗನ್ನಡದ ಸಂಶೋಧನೆ ಮತ್ತು ಅಧ್ಯಯನದತ್ತ ಸಂಕಿರಣಗಳು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಶಾಲೆ ಮತ್ತು ಕಾಲೇಜುಗಳಲ್ಲಿನ ಕನ್ನಡ ಕಲಿಕೆಗೆ ಮೇಲಿನಂತೆ ಬದಲಾವಣೆ ತರುವುದರ ಮೂಲಕ ಈ ಮತ್ತೊಮ್ಮೆ ಆಸಕ್ತಿಯನ್ನು ಕುದುರಿಸಬಹುದೇ ?. ಹಳಗನ್ನಡವನ್ನು ಉಳಿಸಬಹುದೇ ?.
      ಡಾ.ಶ್ರೀಕಾಂತ್ ಸಿದ್ದಾಪುರ