ಮಂಗಳವಾರ, ಮೇ 20, 2014

ಕುಂಜಾರುಗಿರಿಯ  ದುರ್ಗಾದೇವಿ
ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು
ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

ಪ್ರೊ. ಸಿ. ಎನ್. ಆರ್. ರಾವ್
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಮೇ 21, ಕುಂಜಾರುಗಿರಿಯಲ್ಲಿ ದೇವಿಗೆ ರಜತರಥ ಸಮರ್ಪಣೆ. ಅದರೊಂದಿಗೆ ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್. ರಾವ್ ಅವರಿಗೆ ಅದಮಾರು ಮಠದ ಯತಿಗಳಿಂದ ಸಮ್ಮಾನ. ಅಧ್ಯಾತ್ಮ ಮತ್ತು ವಿಜ್ಞಾನಗಳ ಸಮ್ಮಿಲನ. ಈ ಪರಿಸರಕ್ಕೆ ಅಪರೂಪ ಮತ್ತು ಅಪೂರ್ವ ಕಾರ್ಯಕ್ರಮ.
ಮಧ್ವಾಚಾರ್ಯರ ಕರ್ಮಭೂಮಿ:
    ದ್ವೈತ ಸಿದ್ಧಾಂತದ  ಪ್ರಾಚಾರ್ಯರಾದ ಮಧ್ವಚಾರ್ಯರು ಜನಿಸಿದ ಪುಣ್ಯಭೂಮಿ ಪಾಜಕ. ಕುಂಜಾರುಗಿರಿಗೆ ಸಮೀಪದ  ಈ ಪ್ರದೇಶ ಮಧ್ವರಿಗೆ ಸ್ಪೂರ್ತಿ ನೀಡಿದ ತಪೋಭೂಮಿ. 
    ಪುರಾಣಗಳ ಕಾಲದಿಂದಲೂ ಈ ಕ್ಷೇತ್ರ ಮಹತ್ತ್ವ ಪಡೆದಿದೆ.  ಅದಮಾರುಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಒಂದು ಕಡೆ ತಿಳಿಸಿದಂತೆ ಇಲ್ಲಿ ನೆಲೆನಿಂತಿರುವ ದುರ್ಗಾದೇವಿಗೆ  ಸುಮಾರು 5000 ವರ್ಷಗಳ ಇತಿಹಾಸವಿದೆ.  ಈ ವಿಗ್ರಹವನ್ನು ಪ್ರತಿಷ್ಠಾಪಿಸಿದ ಮುನಿ ಪರಶುರಾಮ. ಈ ದುರ್ಗಾ ಬೆಟ್ಟದ ಸುಂದರ ಪರಿಸರವನ್ನೇ ಪರಶುರಾಮನು ತನ್ನ ತಪಸ್ಸಿಗೆ ಆರಿಸಿಕೊಂಡನು.  21 ಸಲ ಭೂಪ್ರದಕ್ಷಿಣೆ ಬಂದು ಕ್ಷತ್ರಿಯರನ್ನು ಪರಶುರಾಮನು ಸಂಹರಿಸುತ್ತಾನೆ.    ತನಗೆ ಅಗತ್ಯ ಭೂಮಿ ನೀಡುವಂತೆ ಸಮುದ್ರರಾಜನನ್ನು ವಿನಂತಿಸುತ್ತಾನೆ. ತನ್ನ ಕೊಡಲಿಯನ್ನೂ ಸಹ್ಯಾದ್ರಿ ಪರ್ವತದಲ್ಲಿ ನಿಂತು ಸಮುದ್ರಕ್ಕೆ ಎಸೆಯುತ್ತಾನೆ.  ಸಮುದ್ರರಾಜನು ಪರಶುರಾಮನ ಅಪೇಕ್ಷೆಯಂತೆ  ಈ ಪವಿತ್ರ ಭೂಮಿಯನ್ನು ಆತನ ತಪೋಕಾರ್ಯಕ್ಕೆ ನೀಡುತ್ತಾನೆ. ಈ ಬೆಟ್ಟದ ಪೂರ್ವ ಭಾಗದ ಗುಹೆಯಲ್ಲಿ ಇಂದಿಗೂ ಪರಶುರಾಮನು ತಪಸ್ಸನ್ನು ಮಾಡುತ್ತಿದ್ದಾನೆಂಬ ನಂಬಿಕೆ ಇದೆ.
    ಕುಂಜಾರುಗಿರಿಯ ದುರ್ಗಾದೇವಿಯು ಚತುರ್ಭುಜೆ.  ಶಂಖ, ಚಕ್ರ, ಬಾಣ ಮತ್ತು ತ್ರಿಶೂಲಗಳನ್ನು ತನ್ನ ನಾಲ್ಕು ಕರಗಳಲ್ಲಿ ಧರಿಸಿ ನಿಂತವಳು. ಪರಶುರಾಮನು ಈ ಬೆಟ್ಟದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸುತ್ತಿರುತ್ತಾನೆ.  ಆಗಸದಲ್ಲಿ ಸಾಗುತ್ತಿರುವ ದೇವತೆಗಳು  ಪರಶುರಾಮನ ಈ ಪುಣ್ಯಕಾರ್ಯವನ್ನು ನೋಡುತ್ತಾರೆ. ಪರಶುರಾಮನ ಈ ಕೆಲಸ ಸಂತಸ ನೀಡುತ್ತದೆ. ಈ ಪುಣ್ಯ ಕೆಲಸವನ್ನು ಅನುಗ್ರಹಿಸುವ ಉದ್ದೇಶದಿಂದ ಪುಷ್ಪವೃಷ್ಟಿಗೈಯುತ್ತಾರೆ. ಹಾಗಾಗಿ ಈ ಪರ್ವತಕ್ಕೆ ವಿಮಾನಗಿರಿ ಎಂಬ ಹೆಸರೂ ಇದೆ.
    ಈ ಬೆಟ್ಟ ಪ್ರದೇಶದಲ್ಲಿ ನಾಲ್ಕು ತೀರ್ಥಗಳಿವೆ. ಪರಶುರಾಮನೇ ಅವುಗಳನ್ನು ಸೃಷ್ಟಿಸಿದನು. ಆ ನಾಲ್ಕು ತೀರ್ಥಗಳು ನಾಲ್ಕು ದಿಕ್ಕಿನಲ್ಲಿವೆ. ಪಶ್ಚಿಮದಲ್ಲಿ ಗದಾತೀರ್ಥ, ಪೂರ್ವದಲ್ಲಿ ಪರಶುತೀರ್ಥ, ಉತ್ತರದಲ್ಲಿ ಬನತೀರ್ಥ ಮತ್ತು ದಕ್ಷಿಣದಲ್ಲಿ ಧನುಷ್ ತೀರ್ಥ.
ಕುಂಜಾರಮ್ಮನಿಗೆ ರಜತರಥ ಸಮರ್ಪಣೆ :
ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಭಕ್ತರ ನೆರವಿನಿಂದ ನಿರ್ಮಿಸಿದ ರಜತರಥವನ್ನು  ಕುಂಜಾರಮ್ಮನಿಗೆ ಮೇ 21 ರಂದು ಅರ್ಪಿಸುತ್ತಿದ್ದಾರೆ. 240 ಕೆ.ಜಿ. ಯ ಬೆಳ್ಳಿರಥವು ಇದಾಗಿದ್ದು, ಹದಿನೇಳೂವರೆ ಅಡಿ ಎತ್ತರ ಹೊಂದಿದೆ. ತಮ್ಮ ಗುರುಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಂಕಲ್ಪ ಇದಾಗಿದ್ದು, ಶಿಷ್ಯರಾದ ವಿಶ್ವಪ್ರಿಯತೀರ್ಥರು ಗುರುಗಳ ಸಂಕಲ್ಪವನ್ನು  ಇದೀಗ ಈಡೇರಿಸುತ್ತಿದ್ದಾರೆ.
ಪ್ರೊ. ಸಿ.ಎನ್. ಆರ್. ರಾವ್ ಮತ್ತು ಅದಮಾರುಮಠ :
    ಪ್ರೊ.ಸಿ.ಎನ್.ಆರ್. ರಾವ್ ವಿಶ್ವವಿಖ್ಯಾತ ವಿಜ್ಞಾನಿ. ಭಾರತರತ್ನ ಪ್ರಶಸ್ತಿಗೆ ಭಾಜನರಾದವರು. ಕುಂಜಾರುಗಿರಿಯ ರಜತರಥದ ಸಮರ್ಪಣೆಯಂದು ಈ ವಿಶ್ವವಿಖ್ಯಾತ ವಿಜ್ಞಾನಿಗೆ ಸಮ್ಮಾನ. ವಿಜ್ಞಾನ ಮತ್ತು ಅಧ್ಯಾತ್ಮಗಳ ಅಪೂರ್ವ ಸಂಗಮ. ಇದು ಅಚ್ಚರಿಯಲ್ಲ. ಅದಮಾರು ಮಠಕ್ಕೂ, ವಿಜ್ಞಾನ ಕ್ಷೇತ್ರಕ್ಕೂ ಹಳೆಯ ನಂಟು. ಕೀರ್ತಿಶೇಷ ಶ್ರೀ ವಿಬುಧೇಶತೀರ್ಥ ಶ್ರೀಪಾದರಿಗೆ ಅಧ್ಯಾತ್ಮದೊಂದಿಗೆ ವಿಜ್ಞಾನ ಕ್ಷೇತ್ರದ ಬಗೆಗೂ ಅಪಾರ ಗೌರವ. ವಿಜ್ಞಾನದತ್ತ ಆಸಕ್ತರಾದ ಶ್ರೀಗಳು ಜಗತ್ತಿನ ಖ್ಯಾತ ವಿಜ್ಞಾನಿಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದರು. ಶ್ರೀಗಳ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾದ ಅಂಥ ವಿಜ್ಞಾನಿಗಳಲ್ಲಿ ಪ್ರೊ. ಸಿ.ಎನ್. ಆರ್. ರಾವ್ ಒಬ್ಬರು. ಕೆಲವು ವರ್ಷಗಳ ಹಿಂದೆ ವಿಜ್ಞಾನ ಕ್ಷೇತ್ರದ ದಿಗ್ಗಜರನ್ನು ಉಡುಪಿಗೆ ಆಹ್ವಾನಿಸಿದ್ದ ಶ್ರೀ ವಿಬುಧೇಶತೀರ್ಥರು ಅವರೊಂದಿಗೆ ಯುವವಿಜ್ಞಾನಿಗಳಿಗೆ ಸಂವಾದದ ಅವಕಾಶವನ್ನೂ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಕಲ್ಪಿಸಿದ್ದರು.  ಅಂದು ಭಾಗವಹಿಸಿದ್ದ ವಿಜ್ಞಾನಿಗಳಲ್ಲಿ ಸಿ.ಎನ್. ಆರ್. ರಾವ್ ಕೂಡ ಒಬ್ಬರು. ಡಾ. ಸಿ.ಎನ್.ಆರ್. ರಾವ್ ಬಗ್ಗೆ ತಮ್ಮ ಗುರುಗಳಿಗಿದ್ದ ಗೌರವ ಮತ್ತು  ವಿಶ್ವಾಸವನ್ನು ಸ್ಮರಿಸಿಕೊಂಡ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಗುರುಗಳ ಸಂಕಲ್ಪವಾದ ರಜತರಥ ಸಮರ್ಪಣೆಯ ಶುಭ ಸಂದರ್ಭದಲ್ಲಿ ಡಾ.ರಾವ್ ಅವರನ್ನು ಸತ್ಕರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.  ಕುಂಜಾರುಗಿರಿಯ ಪುಣ್ಯಭೂಮಿಯಲ್ಲ್ಲಿ ವಿಜ್ಞಾನ ಮತ್ತು ಅಧ್ಯಾತ್ಮದ ಅಪೂರ್ವ ಮಿಲನದ ಈ ದಿನ ನಿಜಕ್ಕೂ ಸದಾ ಸ್ಮರಣೀಯ. ಡಿ.ವಿ.ಜಿ. ಯವರು ಹೇಳಿದ ಮಾತು ಇಲ್ಲಿ ಗಮನಾರ್ಹ.  ಋಷಿವಾಕ್ಯದೊಡನೆ ವಿಜ್ಞಾನ ಕಳೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ.
    ಡಾ.ಶ್ರೀಕಾಂತ್ ಸಿದ್ದಾಪುರ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ