ಶನಿವಾರ, ಸೆಪ್ಟೆಂಬರ್ 29, 2012

OSCAR FERNANDES

 ಸರಳ ಮತ್ತು ಸಜ್ಜನಿಕೆಯ ರಾಜಕಾರಣಿ ಓಸ್ಕರ್ ಫೆರ್ನಾಂಡಿಸ್
 
    ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು ಉಡುಪಿಯ ಓಸ್ಕರ್ ಫೆರ್ನಾಂಡಿಸ್. ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ನಂಬಿಕೆಯ ನಾಯಕರಾಗಿದ್ದ ಓಸ್ಕರ್,  ತಮ್ಮ ಪ್ರಾಮಾಣಿಕತೆ ಹಾಗೂ ಪಕ್ಷ ನಿಷ್ಠೆಯಿಂದಾಗಿ ಇದೀಗ ಸೋನಿಯಾ ಗಾಂಧಿಯವರ ವಿಶ್ವಾಸಕ್ಕೂ ಪಾತ್ರರಾಗಿರುತ್ತಾರೆ. ಶ್ರೀಸಾಮಾನ್ಯನ ಪಾಲಿಗೆ ನೆಚ್ಚಿನ ಓಸ್ಕರಣ್ಣ.
ಓಸ್ಕರರ ಹಿರಿಯರು:
    ಓಸ್ಕರ್ ಫೆರ್ನಾಂಡಿಸರು 1941 ಮಾರ್ಚ್ 27 ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಖ್ಯಾತ ಮುಖ್ಯೋಪಾಧ್ಯಾಯರಾಗಿದ್ದ ರೋಕ್ ಫೆರ್ನಾಂಡಿಸ್, ತಾಯಿ ಲಿಯೊನಿಸ್ಸಾ ಫೆರ್ನಾಂಡಿಸ್. ರೋಕ್ ಫೆರ್ನಾಂಡಿಸ್, ಉಡುಪಿಯ ಅಂದಿನ ಪ್ರಸಿದ್ಧ ಇಂಗ್ಲೀಷ್ ಅಧ್ಯಾಪಕರು. ಇಂಗ್ಲೀಷ್ ಭಾಷೆಯಲ್ಲಿ ಆಳವಾದ ಪಾಂಡಿತ್ಯ ಹೊಂದಿದವರು.  ದೇಶ ಭಕ್ತರಾಗಿದ್ದ ಇವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸ್ವಾತಂತ್ರ್ಯದ ಪರವಾಗಿ ಜನತೆಯಲ್ಲಿ ಹುರಿದುಂಬಿಸಿದವರು. ಸರ್ವಧರ್ಮ ಸಮಭಾವವನ್ನು ಅಳವಡಿಸಿಕೊಂಡಿದ್ದ ರೋಕ್ ಫೆರ್ನಾಂಡಿಸ್ ಉಡುಪಿಯ ಹಾಜಿ ಅಬ್ದುಲ್ಲರಂತೆ ಎಲ್ಲಾ ಮತದವರ ಪ್ರೀತಿಗೂ ಪಾತ್ರರಾಗಿದ್ದವರು. ತನ್ನ ವಿದ್ಯಾರ್ಥಿಗಳನ್ನು ಮಗೂ ಎಂದೇ ಸಂಬೋಧಿಸುತ್ತಿದ್ದ ರೋಕಿ ಮಾಷ್ಟ್ರು ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರು. ತಾಯಿ ಲಿಯೋನಿಸ್ಸಾ ಫೆರ್ನಾಂಡಿಸ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದವರು. ಉಡುಪಿ ನಗರಸಭೆಯ ಸದಸ್ಯರೂ ಆಗಿದ್ದ ಇವರ ಕಾರ್ಯತತ್ಪರತೆಯನ್ನು ಲಾಲಾಲಜಪತ್ ರಾಯ್ ಅವರೂ ಕೊಂಡಾಡಿದ್ದಾರೆ. 1927 ರಲ್ಲಿ ಲಜಪತ್ರಾಯ್ ಬರೆದ Unhappy India ಕೃತಿಯಲ್ಲಿ ಲೊಯೋನಿಸ್ಸಾರನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು  ಟೀಕಿಸಿ ಬ್ರಿಟಿಷ್ ಪತ್ರಕರ್ತೆ ಬರೆದ ಪುಸ್ತಕಕ್ಕೆ ಪ್ರತಿಯಾಗಿ ಲಜಪತ್ರಾಯ್  ಈ ಪುಸ್ತಕವನ್ನು ಬರೆದಿದ್ದರು.  ಭಾರತೀಯರ ಆತ್ಮಾಭಿಮಾನವನ್ನು ಬಡಿದೆಬ್ಬಿಸಬಹುದೆಂಬ ಭೀತಿಯಿಂದ ಈ ಪುಸ್ತಕವನ್ನು ಬ್ರಿಟಿಷ್ ಸರಕಾರ ಕೂಡಲೇ ನಿಷೇಧಿಸಿತ್ತು. ಈ ದಂಪತಿಗಳ ಹನ್ನೆರಡು ಮಂದಿ ಮಕ್ಕಳಲ್ಲಿ ಒರ್ವರು ಓಸ್ಕರ್ ಫೆರ್ನಾಂಡಿಸ್
ಓಸ್ಕರರ ಬಾಲ್ಯದ ದಿನಗಳು:
    ಓಸ್ಕರ್  ಫೆರ್ನಾಂಡಿಸ್ ಇವರ ಪ್ರೌಢಶಿಕ್ಷಣವು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಬಳಿಕ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಕಾಲೇಜು ವ್ಯಾಸಂಗವನ್ನು ಮುಂದುವರಿಸಿದರು. ಓಸ್ಕರರಿಗೆ ಎಳವೆಯಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ. ಕೃಷಿ ಕಾಯಕಗಳಲ್ಲಿ ಸ್ವತ: ತಮ್ಮನ್ನು ತೊಡಗಿಸಿಕೊಂಡ ಓಸ್ಕರ್, ಕೆಲವು ವರ್ಷ ಕೃಷಿಕರಾಗಿಯೂ ದುಡಿದರು. ಕೃಷಿಯೊಂದಿಗೆ ಸಾಮಾಜಿಕ ಸೇವೆಯ ನಂಟು ಓಸ್ಕರರನ್ನು ಅಂಟಿಕೊಂಡಿತು. ಸಮಾಜದ ವಿವಿಧ ವರ್ಗಗಳ ನೋವು ನಲಿವುಗಳಿಗೆ ಸ್ಪಂದಿಸಿದ ಓಸ್ಕರ್,  ಶ್ರಮಜೀವಿಗಳ ಏಳಿಗೆಯ ಬಗ್ಗೆ ಅಪಾರ ಕನಸುಗಳನ್ನೂ ಕಟ್ಟಿಕೊಂಡಿದ್ದರು.
ಸಾರ್ವಜನಿಕ ಸೇವಾರಂಗಕ್ಕೆ ಪಾದಾರ್ಪಣೆ:
    1972 ರಲ್ಲಿ ಓಸ್ಕರರ ಸಮಾಜ ಸೇವಾ ಕಾಳಜಿ  ಒಂದು ನಿರ್ದಿಷ್ಟ ರೂಪ ಪಡೆಯಿತು.  ಉಡುಪಿಯ ಪುರಸಭೆಗೆ ಇಲ್ಲಿನ ಸದಸ್ಯರಾಗಿ ಆಯ್ಕೆ ಮಾಡುವುದರ ಮೂಲಕ ಓಸ್ಕರರ ಸಮಾಜ ಸೇವಾ ಕಾರ್ಯಗಳಿಗೆ ಭದ್ರ ಬುನಾದಿ ಕಲ್ಪಿಸಿತು. ಈ ಹಂತದಿಂದಲೇ ಬೆಳೆಯುತ್ತಾ ಸಾಗಿದ ಓಸ್ಕರ್ ಅವರಿಗೆ ಲೋಕಸಭಾ ಸದಸ್ಯನಾಗುವ ಅವಕಾಶವೂ ಅತಿ ಶೀಘ್ರವಾಗಿ ಒಲಿಯಿತು.  1980 ರಲ್ಲಿ ಉಡುಪಿ ಕ್ಷೇತ್ರದಿಂದ ಭಾರೀ ಬಹುಮತದೊಂದಿಗೆ ವಿಜಯಶ್ರೀಯನ್ನು ಒಲಿಸಿ ಲೋಕಸಭೆಗೆ ಆಯ್ಕೆಯಾದ ಓಸ್ಕರ್, ಸತತ ಐದು ಬಾರಿ ಈ ಉನ್ನತ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿಯೇ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ವಿಶ್ವಾಸಕ್ಕೂ ಪಾತ್ರರಾದರು. ಕೇಂದ್ರದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಓಸ್ಕರ್ ಕೆಲವು ಕಾಲ ರಾಜೀವ್ ಗಾಂಧಿಯವರ ಆಪ್ತಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು.
ರಾಜ್ಯಸಭಾ ಸದಸ್ಯರಾಗಿ ಆಯ್ಕೆ:
    ಆರನೇ ಬಾರಿಗೆ ಲೋಕಸಭೆ ಪ್ರವೇಶಿಸುವಲ್ಲಿ ಅಲ್ಪ ಮತಗಳ ಅಂತರದಿಂದ ವಿಫಲರಾದ ಓಸ್ಕರ್ ಸೋಲನ್ನು ಸೌಜನ್ಯಪೂರ್ವಕ ಸ್ವೀಕರಿಸಿದರು.  ಈ ಸೋಲನ್ನೂ ಜನತೆಯ ಆಶೀರ್ವಾದ ಎಂಬರ್ಥದಲ್ಲಿ ಪರಿಗಣಿಸಿದರು. ಆದರೆ ಈ ಪರಾಭವ ಅವರ ಪಕ್ಷನಿಷ್ಠೆ ಮತ್ತು ಜನಸೇವಾ ಕಾಳಜಿಯನ್ನು ಮತ್ತಷ್ಟು ಎತ್ತರಕ್ಕೇರಿಸಿತು. ಓಸ್ಕರರ ಈ ಉದಾರಗುಣಗಳೇ ಅವರನ್ನು ಮತ್ತೊಮ್ಮೆ ದೆಹಲಿಯತ್ತ ಮುಖ ಮಾಡುವ ಅವಕಾಶ ಕಲ್ಪಿಸಿತು. ಅವರ ನಿಷ್ಕಳಂಕ ರಾಜಕಾರಣ, ಪಕ್ಷದ ಸಂಘಟನೆಯ ಬಗ್ಗೆ  ಅವರಿಗಿದ್ದ ಪ್ರಾಮಾಣಿಕ ಕಳಕಳಿಗಳೇ ಅವರ ಕೈಹಿಡಿದವು.  ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಓಸ್ಕರ್ ಈ ಸ್ಥಾನವನ್ನು ಇಂದೂ ಉಳಿಸಿಕೊಂಡಿದ್ದಾರೆ.
ಓಸ್ಕರರ ಪಕ್ಷನಿಷ್ಠೆ:
    ಓಸ್ಕರ್ ರಾಜಕಾರಣದಲ್ಲಿ ಕೆಳಹಂತದಿಂದ ಎತ್ತರಕ್ಕೇರಿದವರು. ಮಹಾತ್ಮಾ ಗಾಂಧಿಯವರ ತತ್ತ್ವ, ಸಿದ್ಧಾಂತಗಳಲ್ಲಿ ವಿಶ್ವಾಸವಿಟ್ಟವರು.  ಗಾಂಧೀಜಿಯವರ ಉಪದೇಶದಂತೆ ಸರಳ ಜೀವನಕ್ಕೆ ಒತ್ತು ನೀಡಿದವರು. ತನ್ನನ್ನು ಕೈಹಿಡಿದ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವಲ್ಲಿ ಅಹರ್ನಿಶಿ ದುಡಿದವರು.  ಈ ದೃಷ್ಟಿಯಿಂದ ಇವರ ಪಕ್ಷ ಕಾಳಜಿ ಇತರರಿಗೆ  ಒಂದು ಮಾದರಿ. ಪಕ್ಷದ ಚಟುವಟಿಕೆಯಲ್ಲಿ ದಣಿವನ್ನೇ  ಕಾಣದವರು. ರಾತ್ರಿ 12 ಗಂಟೆಯಾದರೂ ಪಕ್ಷದ ಕಾರ್ಯಚಟುವಟಿಕೆಗಳಿಗೆ ವಿಶ್ರಾಂತಿ ನೀಡಿದವರಲ್ಲ. ವಿಶೇಷ ಎಂದರೆ ಓಸ್ಕರರಿಗೆ ರಾಜಕಾರಣದಲ್ಲಿ ಮಂತ್ರಿ ಸ್ಥಾನದ ಕುರಿತು ಒಲವು ಕಡಿಮೆ. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿಯೇ ವಿಶೇಷ ಆಸಕ್ತಿ. ಪಕ್ಷದ ವರಿಷ್ಠರ ಮೇಲೆ ಯಾವುದೇ ಹುದ್ದೆಗಾಗಿ ಒತ್ತಡ ಹೇರಿದವರೂ ಅಲ್ಲ.  ಆದರೆ ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದರೂ ಒಲ್ಲೆನೆನ್ನದೆ, ಆ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದವರು.  ಅವರ ಈ ಗುಣಗಳೇ ಕಾಂಗೇಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಮೆಚ್ಚುಗೆಗೂ ಪಾತ್ರವಾದವು. ಇದೀಗ ಶ್ರೀಮತಿ ಸೋನಿಯಾ ಗಾಂಧಿಯವರ ನಂಬಿಕೆಯ ನಾಯಕರಲ್ಲಿ ಒಬ್ಬರು ಓಸ್ಕರ್. ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಕಾರ್ಯದಶರ್ಿಯಾಗಿ ಹಲವು ಬಾರಿ ಸೇವೆ ಸಲ್ಲಿಸಿದ ಓಸ್ಕರ್, ಪಕ್ಷ ಸಂಘಟನೆಯಲ್ಲಿ ಅಪಾರ ಕೊಡುಗೆ ನೀಡಿರುತ್ತಾರೆ. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷತೆ, ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷತೆ ಹೀಗೆ ಹಲವು ಹೊಣೆಗಳ ಅನುಭವ ಓಸ್ಕರರಿಗಿದೆ. ಇತ್ತೀಚೆಗೆ ಕನರ್ಾಟಕದಲ್ಲಿ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ  ಸೋನಿಯಾ ಆದೇಶದಂತೆ ಪ್ರಧಾನ ಉಸ್ತುವಾರಿಗಳಾಗಿ ಕೆಲಸ ಮಾಡಿದ  ಓಸ್ಕರ್ ಕಾಂಗೇಸ್ ಅಭ್ಯರ್ಥಿ ಶ್ರೀ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸುವಲ್ಲಿ ಯಶಸ್ವೀಯಾದರು. ಪಕ್ಷದ ವಿವಿಧ ಮಟ್ಟದ ಕಾರ್ಯಕರ್ತರನ್ನು ಒಂದುಗೂಡಿಸುವಲ್ಲಿ ಇವರ ಪಾತ್ರ  ಇಲ್ಲಿ ನಿರ್ಣಾಯಕ.  ಈ ವಿಜಯ  ಪಕ್ಷದ ವರ್ಚಸ್ಸಿನೊಂದಿಗೆ ಓಸ್ಕರರ ವರ್ಚಸ್ಸನ್ನೂ ಹೆಚ್ಚಿಸಿತು.ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರ ಅಪೇಕ್ಷೆಯಂತೆ ಕೇಂದ್ರ ಸರಕಾರದ ಕಾರ್ಮಿಕ ಸಚಿವರಾಗಿ, ಅಂಕಿಅಂಶ, ಕ್ರೀಡಾ ಸಚಿವರಾಗಿಯೂ ದುಡಿದ ಓಸ್ಕರ್, ಈ ಹೊಣೆಯನ್ನೂ ನಿಭಾಯಿಸುವಲ್ಲಿ ಎಡವಲಿಲ್ಲ.
ಸಂದ ಪ್ರಶಸ್ತಿಗಳು:
    ಓಸ್ಕರ್ ದೇಶ ಮತ್ತು ವಿದೇಶಗಳ ನಾನಾ ಭಾಗಗಳನ್ನು ಸಂದಶರ್ಿಸಿದವರು.  ದೇಶ ಮತ್ತು ವಿದೇಶದ ಹಲವು ಗೌರವಕ್ಕೂ ಪಾತ್ರರಾದವರು. ಇವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳೂ ಅವರನ್ನು ಅರಸಿಕೊಂಡು ಬಂದಿವೆ. ಸಿಂಡಿಕೇಟ್ ಬ್ಯಾಂಕಿನ ಕೃಷಿ ಪ್ರಶಸ್ತಿ, ನೆಲ್ಸನ್ ಮಂಡೇಲಾ ಪ್ರಶಸ್ತಿ., ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್ ಹೀಗೆ ಹಲವು ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಕಲಾಸಕ್ತ ರಾಷ್ಟ್ರನಾಯಕ:
    ಓಸ್ಕರರು ಬಿಡುವಿಲ್ಲದ ರಾಜಕಾರಣದ ನಡುವೆಯೂ ಕಲಾಸಕ್ತಿಯನ್ನು ಕಳೆದು ಕೊಂಡವರಲ್ಲ. ಮೌತ್ ಆರ್ಗನ್ ಅವರ ನೆಚ್ಚಿನ ವಾದನ. ಸಭೆ, ಸಮಾರಂಭಗಳಲ್ಲಿ ಈ ವಾದನದ ಮೂಲಕ ಕೆಲವು ಹಾಡುಗಳನ್ನು ನುಡಿಸಿ, ಶ್ರೋತೃಗಳಿಂದ ಚಪ್ಪಾಳೆಯ ಸುರಿಮಳೆಗಳನ್ನು ಪಡೆದವರು. ಕುಚುಪುಡಿ ಮತ್ತು ಭರತನಾಟ್ಯ ಓಸ್ಕರರ ಇನ್ನೊಂದು ಹವ್ಯಾಸ. ಈ ಶಾಸ್ತ್ರೀಯ ನೃತ್ಯಗಳನ್ನು ಗುಮುಖೇನ ಕಲಿತ ಓಸ್ಕರ್ ಇಂದಿಗೂ ಇವುಗಳ ಅಭ್ಯಾಸಿ. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದಲ್ಲೂ ಗೆಜ್ಜೆ ಕಟ್ಟಿ ಕುಣಿದವರು. ಇದೀಗ ಓಸ್ಕರ್ ಯೋಗಾಭ್ಯಾಸಿ. ಯೋಗಾಸನಗಳನ್ನು ಯುವಕರೂ ನಾಚುವಂತೆ ಮಾಡಿ ತೋರಿಸಬಲ್ಲ ಓಸ್ಕರ್, ಅಲ್ಲಲ್ಲಿ ಯೋಗಾಸನ ಪ್ರಾತ್ಯಕ್ಷಿಕೆಗಳನ್ನೂ ನೀಡಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
 ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಓಸ್ಕರರ ಕೊಡುಗೆ:
    ಕೊಂಕಣ ರೈಲ್ವೆ ಕಾಮಗಾರಿಯ ಆರಂಭದ ದಿನಗಳಲ್ಲಿ ಓಸ್ಕರ್ ಸಾಕಷ್ಟು ಹೋರಾಡಿದವರು. ಇದನ್ನು ಮಂಜೂರು ಮಾಡಿಸುವಲ್ಲಿ ಓಸ್ಕರರ ಶ್ರಮ ಅಪಾರ. ಉಡುಪಿಗೆ ಸುಸಜ್ಜಿತ ನೂತನ ತಂತ್ರಜ್ಞಾನಾಧಾರಿತ ವಿದ್ಯುನ್ಮಾನ ದೂರವಾಣಿ ಕೇಂದ್ರ ಓಸ್ಕರರ ಶ್ರಮದ ಫಲ. ಓ.ಎನ್.ಜಿ.ಸಿ., ಮಲ್ಪೆ ಬಂದರಿನ ಪ್ರಗತಿ, ಚತುಷ್ಪಥ ನಿರ್ಮಾಣ.  ಹೀಗೆ ಹಲವು ಯೋಜನೆಗಳ ಹಿಂದೆ ಇವರ ಶ್ರಮವಡಗಿದೆ. ಅಡಿಕೆ, ಕಾಫಿ ಮತ್ತು ಭತ್ತದ ಬೆಳೆಗಾರರಿಗೆ ಸಮಸ್ಯೆಗಳು ಎದುರಾದಾಗಲೆಲ್ಲಾ ಓಸ್ಕರ್ ಕೇಂದ್ರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ.
ಸದಾ ಸರಳತೆ ಇವರ ಬಂಡವಾಳ:
    ಬ್ಲೋಸಂ ಫೆರ್ನಾಂಡಿಸರನ್ನು ಕೈಹಿಡಿದ ಓಸ್ಕರ್ರಿಗೆ ಈಗ ಎರಡು ಮಕ್ಕಳು. ಒಬ್ಬ ಮಗ, ಒಬ್ಬಳು ಮಗಳು. ಮಡದಿ ಬ್ಲೋಸಂ ತನ್ನ ಪತಿಯ ಎಲ್ಲಾಕೆಲಸಗಳಿಗೆ ಸದಾ ಬೆಂಬಲವನ್ನೀಯುವವರು.  ತನ್ನನ್ನು ಈ ಹಂತಕ್ಕೆ ಬೆಳೆಸುವಲ್ಲಿ ಸಹಕರಿಸಿದ ಎಲ್ಲಾ ಮತದಾರರು, ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ಬಗ್ಗೆ ಓಸ್ಕರರಿಗೆ ಸದಾ ಗೌರವ. ಶ್ರೀಮತಿ ಸೋನಿಯಾ ಗಾಂಧಿಯವರ ನಿರಂತರ ಪ್ರೋತ್ಸಾಹಗಳನ್ನೂ ಸ್ಮರಿಸುತ್ತಾರೆ. ಉನ್ನತ ಸ್ಥಾನಕ್ಕೇರಿದರೂ ಅಹಂಕಾರದ ಸ್ಪರ್ಶವೇ ಇವರ ವ್ಯಕ್ತಿತ್ವದಲ್ಲಿಲ್ಲ. ಅಂದಿನ ಸರಳತನವೇ ಇಂದಿಗೂ ಇವರ ಆಸ್ತಿ. ಹಿತ ಮಿತವಾದ ಮಾತು, ಸಹನೆ, ತಾಳ್ಮೆ ಇವರ ವ್ಯಕ್ತಿತ್ವದ ಹೆಗ್ಗುರುತು. ಸುದೀರ್ಘ ಕಾಲದ ರಾಜಕಾರಣದಲ್ಲಿ ಕಳಂಕವಿಲ್ಲದ ಇವರ ಕಾರ್ಯವೈಖರಿ ಸದಾ ಸ್ತುತ್ಯರ್ಹ. ಮಹಾಮಾರಿ ಏಡ್ಸ್ ರೋಗದ ವಿರುದ್ಧ ಹೋರಾಟಕ್ಕಾಗಿ ರೂಪುಗೊಂಡ ಸಂಸದೀಯ ಸಮಿತಿಯ ಸಂಚಾಲಕರಾಗಿದ್ದ ಓಸ್ಕರ್ ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಸದೀಯ ಸಮಿತಿಯ ಅಧ್ಯಕ್ಷರು.
                     ಡಾ.ಶ್ರೀಕಾಂತ ಸಿದ್ದಾಪುರ
.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ