ಭಾನುವಾರ, ಸೆಪ್ಟೆಂಬರ್ 30, 2012

Osho & meditation

ಓಶೋ ಮತ್ತು ಧ್ಯಾನ
ಓಶೋರವರ ಪ್ರವಚನಗಳಲ್ಲಿ ಧ್ಯಾನಕ್ಕೆ ವಿಶಿಷ್ಟ ಸ್ಥಾನ. ಅವರ ದೃಷ್ಟಿಯಲ್ಲಿ ಧ್ಯಾನವು  ಮನುಷ್ಯ ಮತ್ತು ಪ್ರಕೃತಿಯೊಂದಿಗೆ ನಮ್ಮ ಸೌಹಾರ್ದ ಸಂಬಂಧವನ್ನು ವೃದ್ಧಿಸುವ ಸಾಧನ. ಧ್ಯಾನಕ್ಕೆ ಮತೀಯವಾದ ಸೀಮೆ ಇಲ್ಲ. ಯಾವ ಮತದವರೂ ಇದನ್ನು ಅಭ್ಯಸಿಸಬಹುದು. ಓಶೋರವರು ಪ್ರತಿಪಾದಿಸುವ ಧ್ಯಾನ ತಂತ್ರವು  ಬುದ್ಧ ಮತ್ತು ಜಪಾನಿನ ಝೆನ್ ಗುರುಗಳಿಂದ ಪ್ರಭಾವಿತವಾಗಿದೆ. ಮನಸ್ಸಿನ ನಿರ್ವಾಣವೇ ಧ್ಯಾನ. ಮನಸ್ಸಿನ ಬೆತ್ತಲೆಯೇ ಧ್ಯಾನ. ಮನಸ್ಸನ್ನು ಪ್ರಾಪಂಚಿಕ ವಿಚಾರಗಳಿಂದ ಮುಕ್ತಗೊಳಿಸುವುದೇ ಧ್ಯಾನ.  ಓಶೋರವರು ಧ್ಯಾನದ ವೇಳೆ ಮನಸ್ಸನ್ನು ನಿಶ್ಚಿತ ವಸ್ತು, ವಿಚಾರ, ಧರ್ಮ ಅಥವಾ ದೇವರ ಚಿಹ್ನೆಗಳ ಮೇಲೆ ಕೇಂದ್ರೀಕರಿಸಬೇಕೆಂಬುದನ್ನು ಸಮರ್ಥಿಸುವುದಿಲ್ಲ. ಮನಸ್ಸಿನ ಓಡಾಟಗಳನ್ನು ಸಾಕ್ಷೀಭಾವದಿಂದ ಗಮನಿಸುವುದಕ್ಕೇ ಇಲ್ಲಿ ಮಹತ್ತ್ವ. ಆ ಮೂಲಕ ಎಚ್ಚರಪ್ರಜ್ಞೆಯ ಬೆಳವಣಿಗೆ. ಮನಸ್ಸು ಎಲ್ಲಾ ಕಾಮನೆಗಳಿಂದ ಬಿಡುಗಡೆಯಾದಾಗಲೇ ಆನಂದ. ಅದೇ ಧ್ಯಾನ. ಧ್ಯಾನದ ಕುರಿತ ಅವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಲು ಹಲವು ದೃಷ್ಟಾಂತ ಕತೆಗಳನ್ನು ಪ್ರವಚಗಳ ಉದ್ದಕ್ಕೂ ನೀಡಿರುತ್ತಾರೆ.
ಪ್ರತಿಫಲಾಪೇಕ್ಷೆಗಳ ಸಂಪೂರ್ಣ ವಿಸರ್ಜನೆಯೇ ಧ್ಯಾನ:
    ನಾನು ಯಾರು? ಎಂಬುದನ್ನು ಅರಿಯುವ ಉತ್ಕಟಾಕಾಂಕ್ಷೆ ಒಬ್ಬನಿಗೆ ಆಯಿತು. ಧ್ಯಾನದಿಂದ ಇದು ಸಾಧ್ಯ ಎಂಬ ನಂಬಿಕೆ ಆತನಲ್ಲಿ ಬೆಳೆಯಿತು. ಅದಕ್ಕಾಗಿ ಸದ್ಗುರುಗಳನ್ನು ಅರಸುತ್ತಾ ಸಾಗಿದನು. ಹೀಗೆ ಹಲವು ವರ್ಷಗಳೇ ಕಳೆದವು. ಆತನಿಗೆ ಏನೂ ಅನುಭವವಾಗಲೇ ಇಲ್ಲ. ಆತನಿಗೆ ಯಾರೋ ಹೇಳಿದರು. ಹಿಮಾಲಯಕ್ಕೆ ಹೋಗು. ಅಲ್ಲಿ ಧ್ಯಾನವನ್ನು ಕಲಿಸುವ ಓರ್ವ ಗುರು ಇದ್ದಾರೆ. ಆದರೆ ಅವರನ್ನು ಸಂಪಕಿಸುವುದು ಕಷ್ಟಸಾಧ್ಯದ ವಿಚಾರ. ಯಾರಾದರೂ ಬರುತ್ತಾರೆ ಎಂದು ತಿಳಿದ ತತ್ಕ್ಷಣ ಸ್ಥಳ ಬದಲಾಯಿಸುತ್ತಾರಂತೆ. ಆತನಿಗೆ ಈ ಹುಡುಕಾಟದಿಂದ ವಯಸ್ಸು ಬೇರೆ ಆಗಿತ್ತು. ಆದರೂ ಹಂಬಲ ಕಡಿಮೆಯಾಗಲಿಲ್ಲ. ಹಿಮಾಲಯಕ್ಕೆ ಹೋಗಿ ಆ ಗುರುವನ್ನು ಹುಡುಕಿ ಧ್ಯಾನವನ್ನು ಕಲಿಯಲೇ ಬೇಕೆಂಬ ಹಠ ಬಲವಾಯಿತು. ಬಹಳ ಕಷ್ಟಪಟ್ಟು ಹಿಮಾಲಯದ ತಪ್ಪಲನ್ನು ತಲುಪಿದನು. ಅಲ್ಲೆಲ್ಲಾ ಗುರುವಿಗಾಗಿ ಹಗಲೂ ರಾತ್ರಿ ಹುಡುಕಾಡಿದನು. ಅವರು ಸಿಗಲೇ ಇಲ್ಲ. ಅಲ್ಲಿದ್ದ ಕೆಲವರನ್ನು ವಿಚಾರಿಸಿದನು. ಅವರು ಹೇಳಿದರು. ಇಲ್ಲಿ ಅಂತಹ ಯೋಗಿ ಇರುವುದು ಸತ್ಯ. ಅವರಿಗೆ 400 ರಿಂದ 500 ವರ್ಷ ವಯಸ್ಸಾಗಿದೆ ಎಂದೂ ಕೇಳಿದ್ದೇವೆ. ಆದರೆ ಯಾರ ಕಣ್ಣಿಗೂ ಬೀಳುತ್ತಿಲ್ಲ. ಬೇಕಾದರೆ ಇನ್ನಷ್ಟು ಹುಡುಕು. ಸಿಕ್ಕಿದರೂ ಸಿಕ್ಕಬಹುದು. ಹಾಗೇನಾದರೂ ಸಿಕ್ಕಿದರೆ ನಿನ್ನ ಪುಣ್ಯ. ಹುಡುಕಾಟವನ್ನು ಮತ್ತೂ ಚುರುಕುಗೊಳಿಸಿದನು. ಸುತ್ತಿ ಸುತ್ತಿ ಸುಸ್ತಾಗಿದ್ದನು. ಅಲ್ಲಿನ ಎಲೆ, ಹಣ್ಣುಗಳನ್ನೇ ತಿಂದು ಜೀವಿಸಿದನು. ಜೀವ ಹೋದರೂ ಸರಿಯೇ, ಧ್ಯಾನವನ್ನು ಕಲಿತೇ ಮರಳುವುದು ಎಂಬ ನಿಧರ್ಾರ ಮತ್ತಷ್ಟು ಆತನಲ್ಲಿ ದೃಢವಾಯಿತು. ಕೊನೆ ಕೊನೆಗೆ ನಡೆಯಲೂ ಆಗದ ಹಂತಕ್ಕೆ ತಲುಪಿದನು. ಹೀಗೆ ಹುಡುಕಾಟದ ನಡುವೆ ಆತನಿಗೊಂದು ಹಳೆಯ ಗುಡಿಸಲು ಕಾಣಿಸಿತು. ಅದರೊಳಗೆ ಪ್ರವೇಶಿದನು. ಅಲ್ಲಿ ಯಾರೂ ಇಲ್ಲ. ಬಾಗಿಲುಗಳೂ ಇಲ್ಲ. ಆಯಾಸದಿಂದ ಗುಡಿಸಲಿನ ನೆಲದ ಮೇಲೆ ದೊಪ್ಪನೆ ಬಿದ್ದನು. ಇನ್ನು ನನ್ನಿಂದ ಏನೂ ಆಗುವುದಿಲ್ಲ. ಇಲ್ಲಿಗೆ ನನ್ನ ಕತೆ ಮುಗಿಯಿತು ಎಂದು ಉದ್ಗರಿಸಿದನು. ಹೀಗೆ ಮಲಗಿದ್ದ ಆತನ ಮೇಲೆ ಹಿಮಾಲಯದ ತಂಪಾದ ಗಾಳಿ ಬೀಸಿತು. ಏನೋ ಅವ್ಯಕ್ತವಾದ ಆನಂದಾನುಭವ ಇದ್ದಕ್ಕಿದ್ದಂತೆ ಆತನಲ್ಲಿ ಮೂಡಿತು. ಕಣ್ಣುಗಳನ್ನು ತೆರೆದನು. ಯಾರೋ ಅವನ ಎದೆಯ ಮೇಲೆ ಕುಳಿತು ಗಹಗಹಿಸಿ ನಗುತ್ತಿದ್ದಾರೆ. ಹೀಗೆ ನಗುತ್ತಿರುವಾತ ಹಣ್ಣು ಹಣ್ಣು ಮುದುಕ. ಕೊನೆಗೂ ಬಂದೆಯಲ್ಲವೇ?. ಇನ್ನು ಏನಾದರೂ ಕೇಳಬೇಕೇ?. ಎದೆಯ ಮೇಲೆ ಕುಳಿತಿದ್ದ ಮುದುಕ ಕೇಳಿದ. ಆತ ಏನೂ ಇಲ್ಲ ಎಂದ. ಧ್ಯಾನ ಎಂದರೇನೆಂದು ಈಗ ತಿಳಿಯಿತೇ?. ಆ ಹಣ್ಣು ಹಣ್ಣು ಮುದುಕ ಮತ್ತೆ ಕೇಳಿದ.  ಆತ ಉತ್ತರಿಸಿದ. ಹೌದು.
    ಧ್ಯಾನವನ್ನು ಕಲಿಯಲು ಗುರುಗಳನ್ನು ಹುಡುಕುತ್ತಾ ಹೊರಟ ಆತನಿಗೆ ಈ ಹಂತದಲ್ಲಿ ಆಕಾಂಕ್ಷೆ, ಹಠ,ಸಾಧನೆ ಎಲ್ಲವೂ ಶೂನ್ಯವಾಗಿತ್ತು. ನನ್ನಿಂದ ಏನೂ ಮಾಡಲಾಗದು ಎಂದು ತೀಮರ್ಾನಕ್ಕೆ ಬಂದ ತತ್ಕ್ಷಣ ಮನಸ್ಸು ಬಯಕೆಗಳಿಂದ ಬರಿದಾಗಿತ್ತು.  ನನ್ನ ಕತೆ ಮುಗಿಯಿತು, ನನ್ನಿಂದ ಏನೂ ಆಗುವುದಿಲ್ಲ ಎಂಬ ಘೋಷಣೆಯು ಆತನ ಸ್ವಯಂನಾಳದಿಂದ ಹೊರಹೊಮ್ಮಿತ್ತು.  ಈ ಸಂದರ್ಭದಲ್ಲಿಯೇ ಆನಂದದ ಅಮೃತಧಾರೆ ಆತನ ಮೇಲೆ ಎರಗಿತ್ತು. ಆತ ಅತ್ಯಂತ ಮೌನಿಯಾಗಿದ್ದನು. ಮನಸ್ಸು ಎಲ್ಲಾ ಪ್ರತಿಫಲಾಪೇಕ್ಷೆಗಳಿಂದ ಮುಕ್ತವಾಗುವುದೇ ಧ್ಯಾನ ಎಂದು ಓಶೋ ಈ ಕತೆಯ ಮೂಲಕ ಪ್ರತಿಪಾದಿಸುತ್ತಾರೆ.
ವ್ಯರ್ಥ ಧ್ಯಾನ:
    ಒಮ್ಮೆ ಮೂವರು ಧ್ಯಾನದತ್ತ ಮುಖ ಮಾಡಿದರು. ಹೀಗೆ ಧ್ಯಾನಕ್ಕೆ ಕುಳಿತಾಗಲೇ ರಾಜಕುಮಾರನೊಬ್ಬ ಕುದುರೆಯ ಮೇಲೇರಿ ಅದೇ ಮಾರ್ಗದಲ್ಲಿ ಸಾಗಿದನು. ಅವರ ಧ್ಯಾನ ಒಂದು ವರ್ಷ ಕಳೆದಿತ್ತು. ಮೂವರಲ್ಲಿ ಒಬ್ಬ ಹೇಳಿದನು. ಆ ರಾಜಕುಮಾರನೇರಿದ ಕುದುರೆಯ ಬಣ್ಣ ಕಪ್ಪು. ಧ್ಯಾನವು ಎರಡು ವರ್ಷ ದಾಟಿತು. ಇನ್ನೋರ್ವ ಹೇಳಿದನು. ನೀನು ಹೇಳಿದುದು ತಪ್ಪು. ಅದರ ಬಣ್ಣ ಬಿಳಿ. ಎರಡೂ ವರ್ಷಗಳು ದಾಟಿ ಮೂರನೇ ವರ್ಷಕ್ಕೆ ಅವರ ಧ್ಯಾನ ಕಾಲಿಟ್ಟಿತು. ಮತ್ತೊಬ್ಬ ಹೇಳಿದನು. ನೀವು ಹೀಗೇ ವಾದ ಮಾಡುತ್ತಿದ್ದರೆ ನಾನು ಇಲ್ಲಿ ಕುಳಿತುಕೊಳ್ಳುವುದಿಲ್ಲ. ಬೇರೆಡೆಗೆ ಹೋಗುತ್ತೇನೆ.
    ಈ ಮೂವರು ಮೂರು ವರ್ಷಗಳ ಕಾಲವೂ ಕುದುರೆಯ ಬಣ್ಣದಂತಹ ಕ್ಷುಲ್ಲಕ ವಿಚಾರಗಳತ್ತಲೇ ತಲೆಕೆಡಿಕೊಂಡರು. ಇಂತಹ ಧ್ಯಾನವು ಧ್ಯಾನವೇ ಅಲ್ಲ ಎಂದು ಓಶೋ ತಿಳಿಸುತ್ತಾರೆ.
ಧ್ಯಾನಿ ಪ್ರತಿಕ್ರಿಯಿಸಬಾರದು :
    ಒಬ್ಬ ಮಾರ್ವಾಡಿಯ ಮನೆಯ ಮುಂದೆ ಭಿಕ್ಷುಕ ಬಂದನು. ಅಯ್ಯಾ ಏನದರೂ ಕೊಡಿ. ಒಂದು ರೊಟ್ಟಿಯನ್ನಾದರೂ ಕೊಡಿ. ತುಂಬಾ ಹಸಿವಾಗಿದೆ. ಮಾರ್ವಾಡಿ ಉತ್ತರಿಸಿದನು. ರೊಟ್ಟಿಯೇ? ಏನೂ ಇಲ್ಲ. ಮತ್ತೆ ಭಿಕ್ಷುಕ ಗೋಗರೆದ. ನಾಲ್ಕಾಣೆಯಾದರೂ ಕೊಡಿ ಸ್ವಾಮಿ. ಮಾರ್ವಾಡಿ ಉತ್ತರಿಸಿದನು. ಒಂದು ಪೈಸೆಯೂ ಇಲ್ಲ. ಪುನ: ಭಿಕ್ಷುಕ ಬೇಡಿದ. ಒಂದು ಹಳೆಯ ಅರಿವೆ ತುಂಡೂ ಇಲ್ಲವೇ?. ಅದನ್ನಾದರೂ ನೀಡಿ. ಮಾರ್ವಾಡಿಗೆ ಎಲ್ಲಿಲ್ಲದ ಕೋಪ ಬಂದಿತು. ನಿನಗೆ ಹೇಳಿದ್ದು ಕೇಳಿಸುವುದಿಲ್ಲವೇ?. ಏನೂ ಇಲ್ಲ. ಮುಂದೆ ಹೋಗು. ಭಿಕ್ಷುಕ ಈಗ ಉತ್ತರಿಸಿದನು. ಹಾಗಾದರೆ ಅಲ್ಲಿ ಯಾಕೆ ಕುಳಿತಿರುವೆ. ನನ್ನೊಂದಿಗೆ ಬಂದು ಬಿಡಬಹುದಲ್ಲವೇ?.
    ಧ್ಯಾನದ ವೇಳೆ ಮನಸ್ಸು ಶೂನ್ಯವಾಗುತ್ತಾ ಹೋಗಬೇಕು. ವಿವಿಧ ಬಯಕೆಗಳು ಮನಸ್ಸಿನ ಸ್ವಭಾವ. ಅದಕ್ಕೆ ಪ್ರತಿಕ್ರಿಯಿಸುತ್ತಾ ಕುಳಿತಲ್ಲಿ ಧ್ಯಾನ ದೂರ. ಭಿಕ್ಷುಕನ ಮಾತಿಗೆ ಪ್ರತಿಕ್ರಿಯಿಸುತ್ತಾ ಹೋದುದರಿಂದಲೇ ಮಾವರ್ಾಡಿ ಪೇಚಾಟಕ್ಕೆ ಸಿಲುಕಿ ಕೊಂಡನು. ಆತ ಸುಮ್ಮನಿದ್ದಿದ್ದರೆ ಭಿಕ್ಷುಕ ಕೆಲವು ಸಲ ಕೂಗಿ ಸುಮ್ಮನೆ ಮುಂದೆ ಸಾಗುತ್ತಿದ್ದನು.
    ಧ್ಯಾನ ಮತ್ತು ಆ ಮೂಲಕ ಮಾನಸಿಕ ನೆಮ್ಮದಿ ಇಂದು ಬಹುಜನರ ಬೇಡಿಕೆ. ಆದರೆ ಮನಸ್ಸಿನ ಚಂಚಲ ಸ್ವಭಾವಗಳನ್ನು ಪಳಗಿಸುವುದು ಸುಲಭವೇ?. ಮನಸ್ಸಿನ ನಿಯಂತ್ರಣಕ್ಕೆ ಹೆಣಗಾಡಿದ ನಮ್ಮ ಹಿಂದಿನ ಸಾಧಕರು ಕೊನೆಗೂ ಮನಸ್ಸನ್ನು ನಿನ್ನತ್ತ ಕೊಂಡು ಹೋಗುವಂತೆ ನೀನೇ ಸಹಕರಿಸು ಎಂದು ಭಗವಂತನಲ್ಲಿ ದೀನರಾಗಿ ಬೇಡಿದರು. ಧ್ಯಾನದ ನೈಜ ಮಾರ್ಗ ಸರಳವೇ?.
                        ಡಾ.ಶ್ರೀಕಾಂತ್ ಸಿದ್ದಾಪುರ   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ