ಶನಿವಾರ, ಫೆಬ್ರವರಿ 26, 2011

Sri A.G.Kodgi & Agriculture

ಪ್ರಗತಿಪರ ಕೃಷಿಕ ಎ.ಜಿ.ಕೊಡ್ಗಿ
ಶ್ರೀ ಎ.ಜಿ.ಕೊಡ್ಗಿಯವರು ಇದೀಗ  ಮುರನೇ
 ಹಣಕಾಸು ಆಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷರು. ರಾಜಕೀಯವಾಗಿ ವಿವಿಧ ಹಂತದ ಹುದ್ದೆಗಳನ್ನು ಅಲಂಕರಿಸಿದವರು. ಇವುಗಳ ನಡುವೆ ತಮ್ಮ ಹಿರಿಯರಿಂದ ಬಂದ ಕೃಷಿಯನ್ನು ಕಡೆಗಣಿಸಿದವರಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಅಂದಿನ ಕಾಲದಲ್ಲಿ ಕಡಿಮೆ ಬೆಲೆಯಲ್ಲಿ ಸೈಟ್ ಕೊಳ್ಳುವ ಅವಕಾಶ ಲಭಿಸಿದ್ದರೂ, ಕೃಷಿಯ ಮೇಲಿನ ಖುಷಿಯಿಂದ ಅಮಾವಾಸೆಬೈಲಿನಂತಹ ಗ್ರಾಮೀಣ ಪ್ರದೇಶವನ್ನೇ ವಾಸ್ತವ್ಯಕ್ಕಾಗಿ ಆರಿಸಿಕೊಂಡವರು.
ಕೊಡ್ಗಿಯವರಿಗೆ ಕೃಷಿಯ ಆಸಕ್ತಿ ಬಾಲ್ಯದಿಂದಲೇ ಬೆಳೆದು ಬಂದಿದೆ. ಅವರ ತಂದೆ ಕೀತರ್ಿಶೇಷ ಕೃಷ್ಣರಾಯ ಕೊಡ್ಗಿಯವರು ಆ ಕಾಲದ ಪ್ರಗತಿಪರ ಕೃಷಿಕರು.  ನೂರಾರು ಎಕರೆ  ಕೃಷಿಭೂಮಿಗೆ ಮಾಲಿಕರು. ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು. ಡಾ. ಶಿವರಾಮ ಕಾರಂತರ ಗೌರವಕ್ಕೂ ಪಾತ್ರರಾದವರು. ತಂದೆಯವರಿಂದಲೇ  ಕೃಷಿಕ್ಷೇತ್ರದತ್ತ ಕೊಡ್ಗಿಯವರು ಆಕಷರ್ಿತರಾದರು.   ಭೂಮಸೂದೆಯು ಕನರ್ಾಟಕದಲ್ಲಿ ಜಾರಿಯಾದ ದಿನಗಳು. ಅಂದಿನ ಮುಖ್ಯಮಂತ್ರಿ ಅರಸರ ಆತ್ಮೀಯರಲ್ಲಿ ಒಬ್ಬರು ಕೊಡ್ಗಿಯವರು. ಭೂಮಸೂದೆ ಕಾನೂನಿನ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲ ನೀಡಿದರು. ತಮ್ಮ ಸ್ವಂತ ಭೂಮಿಯನ್ನೂ ಒಕ್ಕಲುಗಳಿಗೆ ಮಸೂದೆಯನ್ವಯ ನೀಡಿದರು. ಕೃಷಿಕ್ಷೇತ್ರದ ದುಡಿಮೆಯಲ್ಲಿ ಸ್ವಾನುಭವ ಹೊಂದಿದ ಕೊಡ್ಗಿಯವರು, ಈ ಕ್ಷೇತ್ರದ ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನು ಹೊಂದಿದವರು. ಸಮಸ್ಯೆಗಳ ನಡುವೆ ನಲುಗುತ್ತಿರುವ ಇಂದಿನ ದಿನಗಳಲ್ಲಿ ಈ ಚಿಂತನೆಗಳು ಹೆಚ್ಚು ಪ್ರಸ್ತುತ.
ಅಸಮರ್ಪಕ ನಿರ್ವಹಣಾ ವಿಧಾನ : 
ಕೃಷಿಕ್ಷೇತ್ರದ ಕೆಲವು ಸಮಸ್ಯೆಗಳಿಗೆ ಕೃಷಿಕರೇ ಕಾರಣರು. ಅವರಿಗೆ ಸಮರ್ಪಕವಾದ ತರಬೇತಿಯ ಕೊರತೆ ಇದಕ್ಕೆ ಪ್ರಮುಖ ಕಾರಣ. ಕೃಷಿಕರು ಕೃಷಿಕ್ಷೇತ್ರದಲ್ಲಿ ಯಾವುದೇ ಪ್ರಯೋಗಕ್ಕೆ ತೆರಳುವ ಮುನ್ನ ಅದರ ಲಾಭ ಮತ್ತು ನಷ್ಟಗಳ ಅಂದಾಜು ಲೆಕ್ಕವನ್ನು ಮಾಡಬೇಕು. ಯಾವುದೇ ಗೊತ್ತುಗುರಿಯಿಲ್ಲದೇ ಸಾಲ ಮಾಡಿ, ಕೃಷಿ ಮಾಡಿದಲ್ಲಿ ವರ್ಷದಿಂದ ವರ್ಷಕ್ಕೆ ನಷ್ಟವೇ ಅಧಿಕವಾದೀತು. ಈ ಬಗ್ಗೆ ಕೃಷಿಕರಿಗೆ ಪ್ರತಿ ಗ್ರಾಮಮಟ್ಟದಲ್ಲಿ ತರಬೇತಿಗಳನ್ನು ಏರ್ಪಡಿಸಿ, ಸೂಕ್ತ ಮಾರ್ಗದರ್ಶನ ಮಾಡಬೇಕು.
ಮಿಶ್ರಬೆಳೆ ಪದ್ಧತಿ :
ಇಂದಿಗೂ ಕೆಲವು ಕೃಷಿಕರು ಏಕ ಬೆಳೆ ಪದ್ಧತಿಗೇ ಜೋತು ಬಿದ್ದಿದ್ದಾರೆ. ಇದರಿಂದ ಕೃಷಿಯಲ್ಲಿ ಲಾಭ ಪಡೆಯುವ ಸಾಧ್ಯತೆ ಕ್ಷೀಣ. ಇದಕ್ಕಾಗಿ ಮಿಶ್ರಬೆಳೆ ಪದ್ಧತಿಯನ್ನು ಕೃಷಿಕರು ಅಳವಡಿಸಿಕೊಳ್ಳಬೇಕಾಗಿದೆ. ಅಡಿಕೆ ಅಥವಾ ತೆಂಗಿನ ತೋಟವನ್ನೇ ತೆಗೆದುಕೊಳ್ಳಿ. ಅಲ್ಲಿ ಬಾಳೆ, ಕಾಳುಮೆಣಸು, ವೆನಿಲ್ಲಾ, ವೀಳ್ಯದೆಲೆ ಮೊದಲಾದವುಗಳನ್ನು ಮಧ್ಯ ಮಧ್ಯ ಬೆಳೆಸಬಹುದು.
ಸ್ಥಿರ ಮಾರುಕಟ್ಟೆ :
ಕೃಷಿಕ್ಷೇತ್ರದ ಪ್ರಮುಖ ಸಮಸ್ಯೆ ಉತ್ಪನ್ನಗಳ ಬೆಲೆಗಳಲ್ಲಿ ಆಗುತ್ತಿರುವ ಏರಿಳಿತ. ಯಾವುದೇ ಉತ್ಪನ್ನದ ಬೆಲೆ ಇದ್ದಕ್ಕಿದ್ದಂತೆ ಕುಸಿದಾಗ, ಸಹಜವಾಗಿ ಕೃಷಿಕ ಕಂಗಾಲಾಗುತ್ತಾನೆ. ಈ ದೃಷ್ಟಿಯಿಂದ ರೈತರ ಬೆಳೆಗಳ ಬೆಲೆಯ ವಿಚಾರದಲ್ಲಿ ಸ್ಥಿರ ಮಾರುಕಟ್ಟೆಯ ಅಗತ್ಯವಿದೆ.  ಈ ಬಗ್ಗೆ ಗಂಭೀರ ಚಿಂತನೆಗಳಾಗಬೇಕಿವೆ. ಪ್ರತಿಯೊಬ್ಬ ರೈತನಿಗೂ ಒಂದು ಕೃಷಿ ಪಾಸ್ ಪುಸ್ತಕವನ್ನು ಸರಕಾರ ನೀಡಬೇಕು. ಅದರಲ್ಲಿ ರೈತನು ತಾನು ಬೆಳೆಯುತ್ತಿರುವ ಬೆಳೆ, ಅದರ ವಿಸ್ತೀರ್ಣ ಮತ್ತು ಬೆಳೆದ ಬೆಳೆಗಳ ಪ್ರಮಾಣಗಳನ್ನು ನಮೂದಿಸಬೇಕು. ಇದರೊಂದಿಗೆ ಅಗತ್ಯವಾಗಿರುವ ಬೆಳೆಗಳ ಪ್ರಮಾಣದ ಅಂದಾಜು ಲೆಕ್ಕವನ್ನೂ ತೆಗೆಯಬೇಕು. ಹೀಗೆ ಐದು ವರ್ಷಗಳ ಕಾಲದಲ್ಲಿ ಕಲೆಹಾಕಿದ  ಈ ಮಾಹಿತಿಗಳ ಆಧಾರದ ಮೇಲೆ ಬೆಳೆಯ ಬೆಲೆಯನ್ನು ನಿರ್ಧರಿಸಬೇಕು. ಇದರಿಂದ ಸ್ಥಿರ ಮಾರುಕಟ್ಟೆಯನ್ನು ರೈತರ ಉತ್ಪನ್ನಗಳಿಗೆ ನೀಡಬಹುದು. ಇದರೊಂದಿಗೆ ಕೆಲವು ಹಳ್ಳಿಗಳನ್ನು ಒಂದು ಗುಂಪುಗಳನ್ನಾಗಿ ವಿಂಗಡಿಸಿ, ರೈತರ ಉತ್ಪನ್ನಗಳನ್ನು ಮಾರಲು ಅಲ್ಲಿ ಸೂಕ್ತ ಮಾರುಕಟ್ಟೆಯನ್ನು ಸರಕಾರ ವ್ಯವಸ್ಥೆ ಮಾಡಬೇಕು.
ಉಪಉತ್ಪನ್ನಗಳ ತಯಾರಿ :
ಕೃಷಿಯಲ್ಲಿ ಬೆಳೆದ ಯಾವುದೇ ಬೆಳೆಯ ಹೆಚ್ಚುವರಿಯನ್ನು ್ನ ವ್ಯರ್ಥ ಎಂದು ಬದಿಗಿರಿಸುವ ಅಥವಾ ಎಸೆಯುವ ಪರಿಪಾಠ ಉಚಿತವಲ್ಲ. ಅವುಗಳಿಂದ ಉಪಉತ್ಪನ್ನಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಸರಬರಾಜು ಮಾಡುವಂತಾಗಬೇಕು. ಹಾಲನ್ನೇ ತೆಗೆದುಕೊಂಡರೆ, ಅಲ್ಲಿ ಉಳಿದ ಹಾಲಿನಿಂದ ಉಪಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಈ ಕ್ರಮವನ್ನೇ ಕೃಷಿಗೂ ಬಳಸಬಹುದು. ಹಣ್ಣು, ತರಕಾರಿ ಮತ್ತು ಇತರ ಬೆಳೆಗಳ ವಿಚಾರದಲ್ಲಿ ಈ ಕ್ರಮವು ಕೃಷಿಕರ ಹಿತವನ್ನು ಕಾಪಾಡೀತು.
ಪ್ರಾಕೃತಿಕ ವಿಕೋಪಕ್ಕೆ ಸರಕಾರದ ಸ್ಪಂದನ :
ರೈತರು ಪ್ರಾಕೃತಿಕ ಉಪಟಳಕ್ಕೆ ಆಗಾಗ ಗುರಿಯಾಗುತ್ತಿರುತ್ತಾರೆ. ಇಲ್ಲಿ ರೈತ ಅಸಹಾಯಕ. ಇಂತಹ ಸಂದರ್ಭದಲ್ಲಿ ಸರಕಾರವು ರೈತರ ಸಹಾಯಕ್ಕೆ ಮುಂದಾಗಬೇಕು. ಈ ರೀತಿಯ ವಿಕೋಪಕ್ಕೆ ಒಳಗಾದ ಭಾಗದ ರೈತರ ಎಲ್ಲಾ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು.  ಬೆಳೆವಿಮೆಯನ್ನು ಪ್ರತಿ ಕುಟುಂಬಕ್ಕೂ ವಿಸ್ತರಿಸಬೇಕು. ಉಚಿತ ಗೊಬ್ಬರ, ಉಚಿತ ಬೀಜ, ಕಡಿಮೆ ಬಡ್ಡಿಯ ಸಾಲ ಮೊದಲಾದ ಸವಲತ್ತುಗಳನ್ನು ಸರಕಾರ ಈ ಸಂದರ್ಭದಲ್ಲಿ ರೈತರಿಗೆ ನೀಡಬೇಕು. ಪ್ರಾಕೃತಿಕ ವಿಕೋಪದಿಂದ ನಷ್ಟವನ್ನು ಅನುಭವಿಸುತ್ತಿರುವ ರೈತನಿಗೆ ಸರಕಾರವು ಸಕಲ ರೀತಿಯಲ್ಲೂ ಸಹಕರಿಸುವ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.
ಸಹಕಾರಿ ಸಂಘಗಳನ್ನು ಹೆಚ್ಚು ಶಕ್ತಿಶಾಲಿಯನ್ನಾಗಿರಿಸುವುದು :
ರಾಜ್ಯದ ಎಲ್ಲಾ ಭಾಗಗಳಲ್ಲೂ ರೈತರ ಸಹಕಾರಿ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸಬೇಕು. ರೈತರಿಗೆ ಈ ಬ್ಯಾಂಕುಗಳು ಸರಳವಾದ ರೀತಿಯಲ್ಲಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಬೇಕು. ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ನೀಡುವಲ್ಲಿ ಕ್ಲಿಷ್ಟ ಪದ್ಧತಿಯನ್ನು ಅನುಸರಿಸಿದಲ್ಲಿ, ರೈತರು ಲೇವಾದೇವಿದಾರರ ಬಳಿ ಸಾಲ ಪಡೆಯಲು ಮುಂದಾಗುತ್ತಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ದೃಷ್ಟಿಯಿಂದ ಸಹಕಾರಿ ಬ್ಯಾಂಕುಗಳು ರೈತಮಿತ್ರನಂತೆ ನಡೆದುಕೊಳ್ಳಬೇಕು.
ಗ್ರಾಮೀಣ ಭಾಗಗಳ ಅಭಿವೃದ್ಧಿ :
ಇದೀಗ ಗ್ರಾಮೀಣ ಭಾರತ ಕಣ್ಮರೆಯಾಗುವಂತೆ ಕಾಣಿಸುತ್ತಿದೆ. ಗ್ರಾಮೀಣ ಭಾಗವನ್ನು ತೊರೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದು ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಆರೋಗ್ಯ, ಶಿಕ್ಷಣ ಮೊದಲಾದ ಹತ್ತು ಹಲವು ವಿಚಾರಗಳಲ್ಲಿ ಗ್ರಾಮೀಣಭಿವೃದ್ಧಿಗೆ ಸರಕಾರ ಮುಂದಾಗಬೇಕು. ವಿಶೇಷ ಆಥರ್ಿಕ ವಲಯದ ವಿಸ್ತರಣೆಯು ನಗರ ಭಾಗದ ಫಲವತ್ತಾದ  ಕೃಷಿಯೋಗ್ಯ ಭೂಮಿಯನ್ನು ಬಲಿ ತೆಗೆದುಕೊಳ್ಳಬಾರದು. ಗ್ರಾಮೀಣ ಭಾಗದಲ್ಲಿ ಕೃಷಿ ಯೋಗ್ಯವಲ್ಲದ ಭೂಮಿ ಸಾಕಷ್ಟಿದೆ.  ಗ್ರಾಮೀಣ ಭಾಗದ ಈ ಭೂಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಖಾಸಗಿ ಕಂಪೆನಿಗಳು ಮುಂದೆ ಬರಬೇಕು. ಸರಕಾರವೂ ಈ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ವಿಶೇಷ ಆಥರ್ಿಕ ಪ್ರೋತ್ಸಾಹದ ಕ್ರಮಗಳನ್ನೂ ಪ್ರಕಟಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಗ್ರಾಮೀಣ ಭಾಗದಿಂದ ಉದ್ಯೋಗವನ್ನು ಅರಸಿ ನಗರಕ್ಕೆ ವಲಸೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತದೆ.
ರೈತರಿಗೆ ನಿರಂತರ ವಿದ್ಯುತ್ ಪೂರೈಕೆ :
ಕೃಷಿ ಕೆಲಸಕ್ಕೆ ಅಗತ್ಯವಾದ ವಿದ್ಯುತ್ ಪೂರೈಕೆಯನ್ನು ರೈತರಿಗೆ ನಿರಂತರ ನೀಡಬೇಕು. ರೈತರ ಕೃಷಿ ನೀರಾವರಿಗೆ ಉಪಯುಕ್ತವಾದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೂ ಸರಕಾರ ಮುಂದಾಗಬೇಕು.
ಆಧುನಿಕ ಯಂತ್ರಗಳ ಬಳಕೆ :
ಕರಾವಳಿ ಮತ್ತು ಮಲೆನಾಡ ಭಾಗಗಳಲ್ಲಿ ಕೃಷಿಕಾಮರ್ಿಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಎರಡು ಪರಿಹಾರಗಳಿವೆ. ಒಂದು ಸ್ವಂತ ದುಡಿಮೆ. ಇನ್ನೊಂದು ಆಧುನಿಕ ಯಂತ್ರಗಳ ಬಳಕೆ. ಇಂದು ಹೆಚ್ಚಿನ ಕೃಷಿ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ನಿರ್ವಹಿಸಬಹುದು. ಇದರ ಬಗ್ಗೆ ರೈತರಿಗೆ ಅರಿವನ್ನುಂಟು ಮಾಡಬೇಕಾಗಿದೆ. ಇದಲ್ಲದೆ ಈ ಯಂತ್ರಗಳನ್ನು ಹೆಚ್ಚಿನ ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ.
ಇದೀಗ ಕೃಷಿಯತ್ತ ವಿಮುಖರಾಗುವವರೇ ಹೆಚ್ಚು. ಗ್ರಾಮೀಣ ಭಾಗ ಅದರಲ್ಲೂ ಕೃಷಿ ಎಂದರೆ ಯಾರಿಗೂ ಬೇಡದ ಕ್ಷೇತ್ರವಾಗಿದೆ.  ಹಳ್ಳಿಗಳಲ್ಲಿ ಉಳಿದಿರುವ ಕೃಷಿಕರ ಬದುಕೂ ನಿರಾಶಾದಾಯಕವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಆಹಾರದ ಅಭಾವವೂ ದೇಶವನ್ನು ಮುಂದೊಂದು ದಿನ ಕಾಡೀತು.  ಇಂತಹ ಪರಿಸ್ಥಿತಿಯಲ್ಲಿ ಕೃಷಿಕ್ಷೇತ್ರದ ಸಮಗ್ರ ಅಭಿವೃದ್ಧಿಯತ್ತ ಗಂಭೀರವಾಗಿ ಚಿಂತಿಸಬೇಕಾಗಿದೆ. ಪ್ರಗತಿಪರ ಕೃಷಿಕರ, ರೈತಮುಖಂಡರ, ಕೃಷಿತಜ್ಞರ ಸಲಹೆಗಳನ್ನು ಸರಕಾರ ಸ್ವೀಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಗಲಿ ಎಂದು  ಆಶಿಸೋಣ.
      ಡಾ.ಶ್ರೀಕಾಂತ್ಸಿದ್ದಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ